ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಅ.5: ಇಲಾಖೆಯ ಅಧಿಕಾರಿಗಳು ಪರಸ್ಪರ ಸಮನ್ವಯದೊಂದಿಗೆ ಇತರೆ ಇಲಾಖೆಯ ಅಧಿಕಾರಿಗಳೊಂದಿಗೆ ಕೈಜೋಡಿಸಿ ಪ್ರಗತಿ ಹಂತದಲ್ಲಿರುವ ಎಲ್ಲ ಕಾರ್ಯಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಿ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳಾದ ದೀಪಕ ಮಡಿವಾಳರ ಹೇಳಿದರು.
ಇಂದು ತಾಲೂಕು ಆಡಳಿತ ಸೌಧದ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಅವರು ಮಾತನಾಡಿದರು.
ಹುಬ್ಬಳ್ಳಿ ಗ್ರಾಮೀಣ ಹಾಗೂ ಶಹರ ಕ್ಷೇತ್ರ ಶಿಕ್ಷಣ ಇಲಾಖೆಯು ಶಾಲಾ ಮಕ್ಕಳಿಗೆ ಸಮವಸ್ತ್ರ, ಪಠ್ಯ ಪುಸ್ತಕಗಳ ವಿತರಣಾ ಕಾರ್ಯವನ್ನು ನಿಗಧಿತ ಸಮಯದಲ್ಲಿ ಕೈಗೊಳ್ಳಬೇಕು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಖ ಶೌಚಾಲಯವನ್ನು ನಿರ್ಮಿಸಿ ಸ್ವಚ್ಛತೆಯನ್ನು ಕಾಪಾಡಬೇಕು. ತಾಲ್ಲೂಕಿನಲ್ಲಿ ಶಾಲೆಯಿಂದ ದೂರ ಉಳಿದ ಎಸ್ಸಿ ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗಿದ್ದು, ಅಂತಹ ಮಕ್ಕಳನ್ನು ಮರಳಿ ಶಾಲೆಗೆ ಕೆರೆ ತರುವ ಕಾರ್ಯಚರಣೆ ಕೈಗೊಳ್ಳಬೇಕು. ತಾಲೂಕಾ ಮಟ್ಟದಲ್ಲಿ ಸಾಕ್ಷಾರತಾ ಸಮೀಕ್ಷೆ ಕೈಗೊಂಡು ಶೀಘ್ರಗತಿಯಲ್ಲಿ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು
ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಿಗೆ ವ್ಯವಸ್ಥಿತ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣವಾಗಿ ಪೂರ್ಣಗೊಳ್ಳಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಅಧಿಕಾರಿಗಳು ಎಲ್ಲ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಕೆರೆ ಹಳ್ಳಗಳ ನೀರನ್ನು ಪರಿಶೀಲಿಸಬೇಕು. ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇರುವುದರಿಂದ ಎಲ್ಲೆಡೆ ಕುಡಿಯುವ ನೀರಿನ ಅಭಾವ ಕಂಡುಬಂದಿದ್ದು, ನೀರನ್ನು ನಿಯಮಿತ ಮತ್ತು ಸುವ್ಯವಸ್ಥಿತವಾಗಿ ಸರಬರಾಜುಗೊಳಿಸಬೇಕು ಎಂದು ಹೇಳಿದರು.
ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಠಿಕ ಊಟೋಪಚಾರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳು ಕೊಠಡಿಗಳಲ್ಲಿ ಸ್ವಚ್ಛತೆ ಕಾಪಡಿಕೊಳ್ಳುವಂತೆ ವಸತಿ ನಿಲುಯದ ಸಿಬ್ಬಂದಿಗಳು ಜಾಗೃತಿವಹಿಸಬೇಕು. ವಿದ್ಯಾರ್ಥಿಗಳ ಪರೀಕ್ಷೆಗೆ ತೊಂದರೆಯಾಗದಂತೆ ಹೆಸ್ಕಾಂ ವಿದ್ಯುತ್ ಸರಬರಾಜನ್ನು ಪೂರೈಸಬೇಕೆಂದು ಸೂಚಿಸಿದರು.
ಒಟ್ಟು 30 ಕಿಮೀ ರಸ್ತೆ ಮಾರ್ಗಗಳಲ್ಲಿ ನೆಡುತೋಪು ನಿರ್ಮಾಣದ ಗುರಿಯನ್ನು ಹೊಂದಿದ್ದು, ಬುಡ್ನಾಳ, ಚನ್ನಾಪೂರ, ರಾಯನಾಳ, ಕೇಶ್ವಾಪೂರ ರೈಲ್ವೆ ಬ್ರೀಜ್ನಿಂದ ಕುಸುಗಲ್ ರಸ್ತೆಯಲ್ಲಿ ನೆಡುತೋಪು ನಿರ್ಮಾಣ ಪೂರ್ಣಗೊಂಡಿದೆ. ದೇವರ ಗುಡಿಯಾಳ, ಯರೇ ಬುದಿಹಾಳ ಕ್ರಾಸ್ನಿಂದ ಬಸಾಪೂರ ರಸ್ತೆ, ಹುಬ್ಬಳ್ಳಿ ಗದಗ ರಸ್ತೆ ಮಾರ್ಗವಾಗಿ 3 ಕಿಮೀ ರಸ್ತೆಯಲ್ಲಿ ನೆಡುತೋಪು ನಿರ್ವಹಣೆ ಪ್ರಗತಿಯಲ್ಲಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಮನರೇಗಾ ಯೋಜನೆಯಡಿ ಸಸಿನೆಡುವ ಕಾರ್ಯದಲ್ಲಿ ಸ್ಥಳೀಯ ನೌಕರನ್ನು ಬಳಸಿಕೊಳ್ಳಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಗೋವಿನ ಜೋಳ ಕಟಾವು ಪ್ರಕ್ರಿಯೆ ಶುರುವಾಗಲಿದೆ. ಮಳೆಯ ಕೊರತೆಯಿಂದ ಜಾನುವಾರುಗಳಿಗೆ ಮೇವಿನ ಅಭಾವ ಕಂಡುಬಂದಿದ್ದು, ಧನಕರುಗಳಿಗೆ ಮೇವು ಒದಗಿಸಲು ರೈತರು ಗೋವಿನ ಜೋಳದ ಬೆಳೆಗೆ ಮಿಷನ್ ಬಳಸದಂತೆ ರೈತರಿಗೆ ಸೂಚನೆ ನೀಡಿ ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಬಿಪಿಎಲ್ ರೇಷನ್ ಕಾರ್ಡ್ ಬಳಕೆದಾರರಿಗೆ ರಾಜ್ಯ ಸರ್ಕಾರವು ಅಕ್ಕಿಗೆ ಪರ್ಯಾಯವಾಗಿ ನೀಡಲಾಗುತ್ತಿರುವ ಹಣವು ಫಲಾನುಭವಿಗಳ ಖಾತೆಗೆ ಜಮೆಯಾಗುತ್ತಿರುವ ಬಗ್ಗೆ ಪರೀಶೀಲಿಸಿ. ರೇಷನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ಪ್ರಾರಂಬಿಸಬೇಕು ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಹೇಳಿದರು.
ಎಸ್ಸಿಎಸ್ಟಿ ಸಮುದಾಯದ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಯತವತ್ತಾಗಿ ಬೋರ್ವೆಲ್ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತಿದೆ. ಗೃಹಜ್ಯೋತಿ ಯೋಜನೆಯಡಿ ಎಲ್ಲ ಮನೆಗಳಿಗೆ ಉಚಿತ ವಿದ್ಯುತ್ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ.
ತಾಲ್ಲೂಕಿನಲ್ಲಿ ಒಟ್ಟು 155 ಅಂಗನವಾಡಿ ಕೇಂದ್ರಗಳಿದ್ದು, ಇದರಲ್ಲಿ 123 ಸ್ವಂತ ಕಟ್ಟಡವುಳ್ಳ ಅಂಗನವಾಡಿ ಕೇಂದ್ರಗಳಿವೆ. ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ವಿದ್ಯುತ್ ಹಾಗೂ ಪ್ಯಾನ ವ್ಯವಸ್ಥೆ ಮಾಡಿಕೊಡಬೇಕು. ಹೆಬಸೂರಿನಲ್ಲಿ ಯೋಗಕೇಂದ್ರ, ಶಿರಗುಪ್ಪಿಯಲ್ಲಿ ರೈತ ಸಂಪರ್ಕ ಕೇಂದ್ರ ಹಾಗೂ 13 ಅಂಗನವಾಡಿ ಕಟ್ಟಡಗಳನ್ನು ದುರಸ್ಥಿಗೊಳಿಸಲಾಗುವುದು ಎಂದರು.
ಸಭೆಯಲ್ಲಿ ಪಂಚಾಯತ ರಾಜ್ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಕುರ್ತಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕರವೀರಮಠ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರಾದ ಜಗದೀಶ ಪಾಟೀಲ ಇತರೆ ಎಲ್ಲ ತಾಲೂಕ ಮಟ್ಟದ ಅಧಿಕಾರಿಗಳು ಉಸ್ಥಿತರಿದ್ದರು.