ಧಾರವಾಡ 10 – ನಗರದ ಕೆ.ಎಮ್.ಎಫ್ ಹತ್ತಿರವಿರುವ ಡಾ.ಡಿ.ಜಿ.ಶೆಟ್ಟಿ ಏಜ್ಯುಕೇಷನಲ್ ಸೊಸೈಟಿಯ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪರೀಕ್ಷಾ ದೃಷ್ಟಿಯಿಂದ ವಿಜ್ಞಾನ ಹಾಗೂ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ “Review of Science & Mathematics from Examination Point ಪರೀಕ್ಷಾ ದೃಷ್ಟಿಯಿಂದ ವಿಜ್ಞಾನ ಹಾಗೂ ಗಣಿತ ವಿಷಯದ ಕುರಿತು ವಿಮರ್ಶೆ” ಎಂಬ ವಿಷಯದ ಒಂದು ದಿನದ ಕಾರ್ಯಗಾರವನ್ನು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಸುತ್ತಮುತ್ತಲ ಹಳ್ಳಿಗಳಿಂದ ಸುಮಾರು ನೂರಾ ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು ಹಾಗೂ ಇದರ ಉಪಯುಕ್ತತೆ ಪಡೆದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀಮತಿ ಶ್ವೇತಾ ನಾಯಕ, ಶ್ರೀಮತಿ ಭಾರತಿ ನಾಟೆಕರ ಹಾಗೂ ಶ್ರೀಮತಿ ವೀಣಾ ಶಣೈ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ಕುರಿತು ವಿವರಿಸಿದರು.
ಗಣಿತ ವಿಷಯ ಕಬ್ಬಿಣದ ಕಡಲೆ ಅಲ್ಲ ನಿರಂತರ ಅಭ್ಯಾಸ ಮಾಡುವುದರಿಂದ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಅದೇ ರೀತಿ ವಿಜ್ಞಾನ ವಿಷಯವು ಪ್ರಾಯೋಗಿಕ ವಿಷಯವಾಗಿದ್ದು, ಪ್ರತಿನಿತ್ಯದ ಜೀವನದಲ್ಲಿ ಅನ್ವಯವಾಗುವ ವಿಷಯವಾಗಿರುವುದರಿಂದ ಸುಲಭವಾಗಿ ಅಂಕಗಳನ್ನು ಗಳಿಸಬಹುದು ಎಂದರು. ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಿಗಿರುವ ಭಯವನ್ನು ನಿವಾರಿಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿ ಸಮರ್ಥವಾಗಿ ಪರೀಕ್ಷೆಯನ್ನು ಎದುರಿಸುವಂತೆ ಪ್ರರೆಪಿಸಲಾಯಿತು. ಹಾಗೂ ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಡಿ.ಜಿ.ಶೆಟ್ಟಿಯವರು ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಂಡು ಮುಂಬರುವ ಪರೀಕ್ಷೆಗಳನ್ನು ನಿರ್ಭೀತರಾಗಿ ಎದುರಿಸುವಂತೆ ಹುರುದುಂಬಿಸಿದರು. ಕಾರ್ಯಾಗಾರದಲ್ಲಿ ಡಾ.ಎಸ್.ಎಮ್ ಸಾಲಿಮಠ ಹಾಗೂ ಎಸ್.ಎಸ್ ಉಪ್ಪಿನ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಎಸ್ ಎನ್ ಗುಡಿಯವರು ನಿರೂಪಿಸಿದರು, ಆರಂಭದಲ್ಲಿ ರಶ್ಮಿ ಶೆಟ್ಟಿ ಸ್ವಾಗತಿಸಿದರು. ಕೊನೆಗೆ ಗಂಗವ್ವ ಯಲಿಗಾರ ವಂದಿಸಿದರು.