ಧಾರವಾಡ.1- ಕನಕದಾಸರು ತಮ್ಮ ಕೀರ್ತನೆಯಲ್ಲಿ ಭಕ್ತಿ ವೈರಾಗ್ಯ ಭಜನೆಗಳಷ್ಟೆ ಅಲ್ಲದೆ ಹದಿನಾರನೇ ಶತಮಾನದ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತಿ ಅಂದಿನ ಸಮಾಜದ ಸ್ಥಿತಿಗಳನ್ನು ತಿದ್ದುವ ಪ್ರಯತ್ನ ಮಾಡಿದರೆಂದು ಉಪನ್ಯಾಸಕಿ ಚೈತ್ರಾ ಡಿ. ವಿ. ಮಾರ್ಮಿಕವಾಗಿ ತಿಳಿಸಿದರು.
ಕೆ. ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ 536 ನೇ ಕನಕದಾಸರ ಜಯಂತಿಯಲ್ಲಿ ಮಾತನಾಡಿ ಸಾಮಾನ್ಯ ಬದುಕಿನಿಂದ ತಿಮ್ಮಪ್ಪ ಕನಕದಾಸರಾಗಿ, ಕೀರ್ತನಕಾರರಾಗಿ, ತತ್ವಜ್ಞಾನಿಯಾಗಿ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಕನಕದಾಸರ ಕೊಡುಗೆ ನೀಡಿದರು. ಸಿಕ್ಕ ಚಿನ್ನವನ್ನು ಜನರ ಕಲ್ಯಾಣಕ್ಕಾಗಿ ಉಪಯೋಗಿಸಿದರು ಎಂದು ತಿಳಿಸಿದರು. ಪ್ರಾಚಾರ್ಯೆ ಸುನಿತಾ ಕಡಪಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಕನಕದಾಸರ ಕೀರ್ತನೆ ಹಾಡಿದರು. ಈ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಎಸ್. ಎಲ್. ಶೇಖರಗೋಳ, ಜಿ. ಸಿ. ಕುಲಕರ್ಣಿ, ಎಚ್.ಎಸ್. ಕರಿಗಾರ ಆರ್. ಕೆ. ಇಸ್ಲಾಂಪುರೆ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು ಎಂದು ಪ್ರಾಚಾರ್ಯರಾದ ಎಸ್.ಜಿ.ಕಡಪಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.