ಬೆಂಗಳೂರು, ನವೆಂಬರ್ 27 (ಕರ್ನಾಟಕ ವಾರ್ತೆ):
ಸೌದಿ ಅರೇಬಿಯಾ ಜೆಡ್ಡಾ ಹಜ್ ಯಾತ್ರೆ-2024 ಕ್ಕೆ ತಾತ್ಕಾಲಿಕ ನಿಯೋಜನೆ ಮೇರೆಗೆ ಸಂಯೋಜಕರು (ಆಡಳಿತ) ಸಹಾಯಕ ಹಜ್ ಅಧಿಕಾರಿ / ಹಜ್ ಸಹಾಯಕರು (ಭಾರತದ ಕಾನ್ಸುಲೇಟ್ ಜನರಲ್ ಅವರಿಗೆ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಆನ್ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಯನ್ನು ಅಲ್ಪಸಂಖ್ಯಾತ ವ್ಯವಹಾರಗಳ ಮಂತ್ರಾಲಯದ ಹಜ್ ವಿಭಾಗಕ್ಕೆ ನಿಗದಿತ ಸಮಯದೊಳಗೆ ಸಲ್ಲಿಸಬೇಕು. ಯಾವುದೇ ಅರ್ಜಿದಾರರು ರಾಜಕೀಯ ಅಥವಾ ಇನ್ನಾವುದೇ ಹೊರಗಿನ ಒತ್ತಡದಿಂದ ಕೆಲಸ ನಿರ್ವಹಿಸುವುದನ್ನು ನಿಷೇಧಿಸಿದೆ.
ಅರ್ಜಿದಾರರು ಅರ್ಜಿಗಳನ್ನು ಆನ್ಲೈನ್ ಮುಖಾಂತರ ವೆಬ್ಸೈಟ್ www.haj.nic.in/deputation ಮೂಲಕ ಸಲ್ಲಿಸಬಹುದು. ಅರ್ಜಿ ಜೊತೆಗೆ ಸ್ವಯಂ ದೃಢೀಕರಣದೊಂದಿಗೆ ತಮ್ಮ ಎಸ್ಎಸ್ಎಲ್ಸಿ ಅಂಕಪಟ್ಟಿಯನ್ನು ವಯಸ್ಸಿನ ದಾಖಲೆಗಾಗಿ ಸಲ್ಲಿಸಬೇಕು. ವೈದ್ಯಕೀಯ ಪ್ರಮಾಣಪತ್ರವನ್ನು ಆರೋಗ್ಯ ಸುಸ್ಥಿತಿಗಾಗಿ ಯಾವುದೇ ಸರ್ಕಾರಿ ಆಸ್ಪತ್ರೆಯಿಂದ ದೃಢೀಕರಿಸಿ ನೀಡಬೇಕು. ಅಲ್ಲದೇ ತಮ್ಮ ಇತ್ತೀಚಿನ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬೇಕು.
ಬರಹ ರೂಪದ, ಅಪೂರ್ಣ, ಮುಂಗಡ, ತಿದ್ದಿದ, ಸೂಕ್ತ ಸಮಕ್ಷಮದಿಂದ ಬಾರದ, ಅವಧಿ ಮೀರಿ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
ಅರ್ಜಿದಾರರ ವಯೋಮಿತಿ 25 ರಿಂದ 45 ವರ್ಷಗಳು 2024, ಜನವರಿ 01 ಕ್ಕೆ ಅನ್ವಯವಾಗುವಂತೆ ಇರತಕ್ಕದ್ದು. ಹಜ್ಗೆ ಮೂರು ಬಾರಿಗಿಂತಲೂ ಹೆಚ್ಚು ನಿಯೋಜನೆಗೊಂಡವರನ್ನು ಪರಿಗಣಿಸಲಾಗುವುದಿಲ್ಲ. ಹಜ್ ಸಂಯೋಜಕರು (ಆಡಳಿತ) ಇವರು ಕೇಂದ್ರ ಸರ್ಕಾರ ಸೇವೆಯಲ್ಲಿದ್ದು, ಶ್ರೇಣಿ 12 ಅಥವಾ 13 ರನ್ವಯ 7ನೇ ಕೇಂದ್ರ ವೇತನ ಆಯೋಗದ ವೇತನ ಪಡೆಯುತ್ತಿರಬೇಕು. ಸಹಾಯಕ ಹಜ್ ಅಧಿಕಾರಿಗಳು ಗ್ರೂಪ್ ‘ಎ’ ಅಥವಾ ‘ಬಿ’ ದರ್ಜೆಯ ರಾಜ್ಯ ಸರ್ಕಾರಿ ಅಧಿಕಾರಿಗಳಾಗಿದ್ದು, ವೇತನ ಶ್ರೇಣಿ 8 ರಿಂದ 11 ರವರೆಗೆ 7ನೇ ರಾಜ್ಯ ವೇತನ ಆಯೋಗದ ವೇತನ ಪಡೆಯುತ್ತಿರಬೇಕು. ಹಜ್ ಸಹಾಯಕರು ಗ್ರೂಪ್ ಬಿ / ಸಿ ನಾನ್ ಗೆಜೆಟೆಡ್ ಅಧಿಕಾರಿಗಳಾಗಿದ್ದು, ಶ್ರೇಣಿ 4 ರಿಂದ 7 ರವರೆಗೆ 7 ನೇ ರಾಜ್ಯ ವೇತನ ಆಯೋಗದ ವೇತನ ಪಡೆಯುತ್ತಿರಬೇಕು.
ಇದಲ್ಲದೇ ಒಳ್ಳೆಯ ಸಂವಹನ ಕಲೆ, ಕಂಪ್ಯೂಟರ್ ಸಾಕ್ಷರತೆ, ವಿಕೋಪ ನಿರ್ವಹಣೆಯ ಅನುಭವ ಇದ್ದು, ಅರೇಬಿಕ್ ಭಾಷೆಯ ನೈಪುಣ್ಯವಿರಬೇಕು. ವೇತನವನ್ನು ಅಧಿಕಾರಿಗಳ ಮೂಲ ಇಲಾಖೆಯ ಕೊನೆಯ ಆದಾಯಪತ್ರ (ಎಲ್ಪಿಸಿ) ಅನ್ವಯ ಇತರ ಭತ್ಯೆ ನೀಡಲಾಗುವುದು.
ನೌಕರ ನಿಯೋಜನೆ ಅವಧಿ ಮೇ 2024 ರಿಂದ ಜುಲೈ 2024 ರವರೆಗೆ ಎರಡು ತಿಂಗಳ ಕಾಲವಿದ್ದು, ಮುಸ್ಲಿಂ ಸಮುದಾಯದ ಅಧಿಕಾರಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಪ್ರಸ್ತುತ ಹಜ್ ಯಾತ್ರೆಯಲ್ಲಿ ಸುಮಾರು 1,40,000 ಭಾರತೀಯ ಯಾತ್ರಿಗಳು ಪಾಲ್ಗೊಳ್ಳುವ ಸಂಭವವಿದೆ. ನಿಯೋಜನೆಗೊಂಡ ಅಧಿಕಾರಿಗಳು ಯಾತ್ರಾರ್ಥಿಗಳು ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿರತಕ್ಕದ್ದು. ಆನ್ಲೈನ್ ಮೂಲಕ ಅರ್ಜಿಗಳನ್ನು ಡಿಸೆಂಬರ್ 9, 2023 ರೊಳಗೆ ಸಲ್ಲಿಸಬೇಕು. ಇತರ ಪೂರಕ ದಾಖಲೆ ಸಲ್ಲಿಸಲು ಡಿಸೆಂಬರ್ 26, 2023 ರವರೆಗೆ ಅವಕಾಶವಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.