Site icon MOODANA Web Edition

ಹಳೆಯ ವಿದ್ಯಾರ್ಥಿಗಳಿಗೆ ಯು.ಜಿ ಮತ್ತು ಪಿ.ಜಿ ಪರೀಕ್ಷೆ ಬರೆಯಲು ಕೊನೆಯ ಅವಕಾಶ

ಬೆಂಗಳೂರು, ಮಾರ್ಚ್ 20  (ಕರ್ನಾಟಕ ವಾರ್ತೆ) :

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2001-02 ರಿಂದ 2014-15ನೇ ಶೈಕ್ಷಣಿಕ ಸಾಲುಗಳಲ್ಲಿ ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಬಿ.ಎ., ಬಿ.ಕಾಂ., ಬಿ.ಲಿಬ್.ಐ.ಎಸ್ಸಿ., ಎಂ.ಎ., ಎಂ.ಕಾಂ., ಎಂ.ಎಸ್ಸಿ., ಎಂ.ಲಿಬ್.ಐ.ಎಸ್ಸಿ., ಎಲ್.ಎಲ್.ಎಂ., ಬಿ.ಎಡ್., ಬಿ.ಎಡ್. (ವಿಶೇಷ ಶಿಕ್ಷಣ) ಮತ್ತು ಎಂ.ಎಡ್. ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವು ಒಂದು ಬಾರಿಯ ಅಂತಿಮ ಅವಕಾಶವನ್ನು ನೀಡಿದೆ.

ಕಾರಣಾಂತರಗಳಿಂದ ಪರೀಕ್ಷೆಗಳನ್ನು ತೆಗೆದುಕೊಳ್ಳದ ಅಥವಾ ಉತ್ತೀರ್ಣರಾಗದ ಹಳೆಯ ವಿದ್ಯಾರ್ಥಿಗಳು ಈಗ ಪರೀಕ್ಷಾ ಶುಲ್ಕವನ್ನು ಪಾವತಿಸಿ ತಮ್ಮ ಕೋರ್ಸ್‍ಗಳನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ.

ದಂಡ ಶುಲ್ಕವಿಲ್ಲದೆ ಶುಲ್ಕ ಪಾವತಿಸಲು ಮಾರ್ಚ್ 30 ಕೊನೆಯ ದಿನಾಂಕವಾಗಿದೆ. ರೂ. 200/- ದಂಡ ಶುಲ್ಕದೊಂದಿಗೆ ಪಾವತಿಸಲು ಏಪ್ರಿಲ್ 06 ಕೊನೆಯ ದಿನಾಂಕವಾಗಿದೆ.
ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್ www.ksoumysuru.ac.in  ಮೂಲಕವೇ ಪರೀಕ್ಷಾ ಶುಲ್ಕವನ್ನು ಪಾವತಿಸಬೇಕು. ಅರ್ಹ ವಿದ್ಯಾರ್ಥಿಗಳು ಈ ಸುವರ್ಣಾವಕಾಶವನ್ನು ಬಳಸಿಕೊಂಡು, ಅಧ್ಯಯನ ಸಾಮಗ್ರಿಗಳನ್ನು ಅಭ್ಯಸಿಸಿ ಪರೀಕ್ಷೆಗೆ ಹಾಜರಾಗುವ ಮೂಲಕ ತಮ್ಮ ಪದವಿಯನ್ನು ಪೂರ್ಣಗೊಳಿಸಿಕೊಳ್ಳಬೇಕೆಂದು ಬೆಂಗಳೂರು ಪ್ರಾದೇಶಿಕ ಕೇಂದ್ರ-01 ರ ಪ್ರಾದೇಶಿಕ ನಿರ್ದೇಶಕರಾದ ಡಾ. ರೋಹಿತ್ ಹೆಚ್.ಎಸ್. ರವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಪ್ರಾದೇಶಿಕ ಕೇಂದ್ರ-01, ಮೊದಲನೇ ಮಹಡಿ, ಕೆ.ಎಸ್.ಆರ್.ಟಿ.ಸಿ ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-560026 ಹಾಗೂ ದೂರವಾಣಿ ಸಂಖ್ಯೆ: 080-2660 3664 / 98805-26439 / 90195-26439 ಗೆ ಸಂಪರ್ಕಿಸಬಹುದು.

Exit mobile version