ಹುಬ್ಬಳ್ಳಿ (ಕರ್ನಾಟಕ ವಾರ್ತೆ).ಫೆ.7: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗ್ರಾಮ ಪಂಚಾಯತ ಪಶುಪತಿಹಾಳ ಸಹಕಾರದೊಂದಿಗೆ ಗಿರಿಜನ ಉತ್ಸವವನ್ನು ಫೆಬ್ರವರಿ 8 ರಂದು ಸಂಜೆ 6 ಗಂಟೆಗೆ ಪಶುಪತಿಹಾಳ ಗ್ರಾಮದ ಶ್ರೀ ಹೊನ್ನಂಬಾದೇವಿ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ, ಕರ್ಣಾಟಕ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾದ ವಿನಯ ಕುಲಕರ್ಣಿ, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಬ್ಬಯ್ಯ ಪ್ರಸಾದ, ವಾಯುವ್ಯ ಸಾರಿಗೆ ನಿಗಮ ನಿಯಮಿತದ ಅಧ್ಯಕ್ಷರಾದ ಭರಮಗೌಡ (ರಾಜು) ಅಲಗೌಡ ಕಾಗೆ, ಕರ್ನಾಟಕ ಕೈಮಗ್ಗ ನಿಗಮ ನಿಯಮಿತದ ಅಧ್ಯಕ್ಷರಾದ ಜೆ.ಎನ್. ಗಣೇಶ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ವಿಶೇಷ ಅಥಿತಿಗಳಾಗಿ ಆಗಮಿಸುವರು.
ಶಾಸಕರಾದ ಎಂ.ಆರ್.ಪಾಟೀಲ ಅಧ್ಯಕ್ಷತೆ ವಹಿಸುವರು. ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸುವರು.
ಮಹಾಂತೇಶ ಡೊಳ್ಳಿನ ಮತ್ತು ತಂಡದಿಂದ ತತ್ವಪದ ಗಾಯನ, ಪ್ರಸನ್ನ ಸಿಂಧಗಿ ಮತ್ತು ತಂಡದಿಂದ ಸುಗಮ ಸಂಗೀತ, ನೀಲವ್ವ ಇಟಗಿ ಮತ್ತು ವೃಂದದಿಂದ ಜಾನಪದ ಗೀತೆಗಳ ಗಾಯನ, ಬಸವರಾಜ ತಳಗಡಿ ಮತ್ತು ತಂಡದಿಂದ ಡೊಳ್ಳು ಕುಣಿತ, ಯಲ್ಲಪ್ಪಾ ಬಿಲಕಾರ ಮತ್ತು ತಂಡದಿಂದ ಹೆಜ್ಜೆಮೇಳ ಕುಣಿತ, ಸುರೇಶ ಬಸರಿಕೊಪ್ಪ ಮತ್ತು ತಂಡದಿಂದ ಕರಡಿ ಮಜಲು, ದೇವಕ್ಕ ದೊಡ್ಡಮನಿ ಮತ್ತು ತಂಡದಿಂದ ಸೋಬಾನ ಪದಗಳು, ರಾಜು ತಳವಾರ ಮತ್ತು ತಂಡದಿಂದ ಗೀಗೀ ಪದ, ಬಸಪ್ಪಾ ಮುತ್ತಣ್ಣವರ ಮತ್ತು ತಂಡದಿಂದ ಭಜನೆ, ಮಾರುತಿ ಚಂದ್ರಗಿರಿ ಮತ್ತು ತಂಡದಿಂದ ಜೋಗತಿ ನೃತ್ಯ, ಬಸವ್ವ ಮಾಳಗಿ ಮತ್ತು ತಂಡದಿಂದ ಮಹಿಳಾ ಡೊಳ್ಳು ಕುಣಿತ, ಸಿದ್ದಪ್ಪ ಡೊಳ್ಳಿನ ಮತ್ತು ತಂಡದಿಂದ ಭಜನಾ ಪದಗಳು, ದೇವಪ್ಪ ಆಡಿನ ಮತ್ತು ತಂಡದಿಂದ ಕುದುರೆ ಕುಣಿತ, ಸೋಮಣ್ಣ ಕಲ್ಲಣ್ಣವರ ಮತ್ತು ತಂಡದಿಂದ ಜಾನಪದ ಗಾಯನ, ಫಕ್ಕೀರಪ್ಪ ತಳವಾರ ಮತ್ತು ತಂಡದಿಂದ ದೊಡ್ಡಾಟ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ 4 ಗಂಟೆಗೆ ವಿವಿಧ ಕಲಾ ತಂಡಗಳಿಂದ ಪಶುಪತಿಹಾಳ ಗ್ರಾಮದ ಶ್ರೀ ಮೈಲಾರ ಲಿಂಗೇಶ್ವರ ದೇವಸ್ಥಾನದಿಂದ ಮುಖ್ಯ ರಸ್ತೆ ಮಾರ್ಗವಾಗಿ ಹೊನ್ನಂಬಾದೇವಿ ದೇವಸ್ಥಾನದ ಆವರಣದವರೆಗೆ ಮೆರವಣಿಗೆ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ ಬೇಕ್ಕೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.