ಹುಬ್ಬಳ್ಳಿ: ಶೈಕ್ಷಣಿಕ ಪರೀಕ್ಷೆಗಳಿಗೆ ಭಯಪಡದೆ ಪರಿಪೂರ್ಣವಾಗಿ ಸಿದ್ಧಪಡಿಸಿಕೊಂಡು ಪರೀಕ್ಷೆಗಳನ್ನು ಎದುರಿಸಿ ಉತ್ತಮ ವಿದ್ಯಾರ್ಥಿಗಳಾಗಿರಿ, ನಿಮ್ಮ ಬಾಳು ಬಂಗಾರವಾಗಲಿ, ಕಾಲೇಜು ಜೀವನದಿಂದಲೆ ನಾವು ಉತ್ತಮ ಮನುಷ್ಯರಾಗಿ ಬದುಕುತ್ತ ಉಸಿರು ನಿಂತರೂ ಹೆಸರು ಉಳಿಸಬೇಕು ಎಂದು ಕನಕದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ರವೀಂದ್ರನಾಥ ದಂಡಿನ ಹೇಳಿದರು.
ನಗರದ ಕನಕದಾಸ ಶಿಕ್ಷಣ ಸಮಿತಿಯ ವಿಜಯನಗರ ಪದವಿ ಪೂರ್ವ ಕಾಲೇಜಿನ ಡಾ. ಬಿ.ಎಫ್ ದಂಡಿನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾರಿತೋಷಕ ವಿತರಣೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಅವರು ಮಾತನಾಡಿದರು.
ಪಿ.ಯು ವಿದ್ಯಾರ್ಥಿಗಳು ತಮ್ಮ ಪ್ರಬುದ್ಧತೆಯನ್ನು ಹೆಚ್ಚು ಮಾಡಿಕೊಂಡು, ಜೀವನದ ಗುರಿಯನ್ನು ತಲುಪಬೇಕು. ಓದುವ ಹಂತದಲ್ಲಿ ಬೇರೆಕಡೆ ಗಮನಹರಿಸದೆ ಅಭ್ಯಾಸಕ್ಕೆ ಒತ್ತು ನೀಡಿದರೆ ಗಿರಿ ತಲುಪುವ ಹಾದಿ ಸುಗಮವಾಗುತ್ತದೆ ಎಂದು ಕಿವಿಮಾತು ಹೇಳಿದರು.
ನಿನ್ನೆ ಏನು ಆಯಿತು ಎಂಬ ಅರಿವಿನಿಂದ ಮುಂದೆ ಮಾಡಬಹುದಾದ ಗುರಿಸಾಧನೆಗಳನ್ನು ಇಂದು ಸಿದ್ಧಮಾಡಿಕೊಳ್ಳಬೇಕು. ಮತ್ತು ಸಮಯಕ್ಕೆ ಯಾರು ಬೆಲೆ ಕೊಡುತ್ತಾರೊ ಅವರು ಜೀವನದಲ್ಲಿ ಮುಂದೆ ಬರುತ್ತಾರೆ ಎಂದು ತಿಳಿಸಿದರು.
ದೇಶಕ್ಕಾಗಿ ಸೇವೆ ಸಲ್ಲಿಸಿದ ಅನೇಕ ಮಹಾತ್ಮರು ನಡೆದ ದಾರಿಯಲ್ಲಿ ನಡೆದರೆ ನಮಗೆ ಸನ್ಮಾರ್ಗ ಸಿಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಪಾರಿತೋಷಕ ವಿತರಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಧಾರವಾಡದ ಇಂಗ್ಲೀಷ ವಿಭಾಗದ ಮುಖ್ಯಸ್ಥರಾದ ಡಾ. ಗುರುನಾಥ ಬಡಿಗೇರ ಮಾತನಾಡುತ್ತ, ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಒಬ್ಬ ಸೈನಿಕ ಆಗಬಹುದು, ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಗುರಿ ಸಾಧನೆಗಾಗಿ ದೃಢ ನಿರ್ಧಾರ ತೆಗೆದುಕೊಳ್ಳುವವರಾಗಬೇಕು ಎಂದು ಹೇಳಿದರು.
ಪಿಯು ಶಿಕ್ಷಣ ನಮ್ಮ ಬದಲಾವಣೆ ಹಂತ ಇಲ್ಲಿ ಸಾಧನೆ ಮಾಡಿದರೆ ಮುಂದಿನ ವಿಶ್ವವಿದ್ಯಾಲಯದ ಶಿಕ್ಷಣಕ್ಕೆ ಸುಗಮದಾರಿಯಾಗುತ್ತದೆ, ಇತಿಹಾಸ ಪುಟ ತಿರುವಿ ನೋಡಿದಾಗ ಕಷ್ಟದಲ್ಲಿ ಇದ್ದವರು, ಸವಾಲುಗಳನ್ನು ಎದುರಿಸಿದವರು ಜೀವನದಲ್ಲಿ ಸಾಧನೆ ಮಾಡಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಗುರುಗಳು ಮತ್ತು ಪಾಲಕರು ಹೇಳಿದ ಮಾತನ್ನು ಪಾಲಿಸಬೇಕು ಏಕೆಂದರೆ ಸಮಯ ಕಳೆದುಹೊದರೆ ಮತ್ತೆ ಬಾರದು ಎಂಬ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನಕದಾಸ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ ಅಧ್ಯಕ್ಷೀಯ ನುಡಿಗಳನ್ನಾಡುತ್ತ, ಗುರಿ ಮುಟ್ಟಲು ಶ್ರಮಪಟ್ಟು ಓದಬೇಕು, ಪಾಲಕರ ಮತ್ತು ಶಿಕ್ಷಕರಿಗೆ ಸಾಧನೆಯ ಮೂಲಕ ಕೀರ್ತಿ ಹೆಚ್ಚಿಸುವ ಕಾರ್ಯ ಮಾಡಡಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ಸಾಧಕರ ಹಿಂದಿನ ಸಾಧನೆಯನ್ನು ಓದಬೇಕು, ವಿದ್ಯಾರ್ಥಿಗಳ ಮನಸ್ಸನ್ನು ಕೇಂದ್ರೀಕರಿಸುವ ನಿಟ್ಟಿನಲ್ಲಿ ಗುರುಗಳು ಪ್ರೋತ್ಸಾಹ ನೀಡುತ್ತಾರೆ, ಹಾಗೆ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಿ.ಯು ದ್ವಿತಿಯ ವರ್ಷದಲ್ಲಿ ಸಾಧನೆ ಮಾಡಿದ ವಾಣಿಜ್ಯ ವಿಭಾಗದ, ಉಷಾ, ಸುಪ್ರೀಯ ಮತ್ತು ಅಮೀತ, ಕಲಾ ವಿಭಾಗದ, ಅಂಜುಮಾ. ಲಕ್ಷ್ಮೀ ಮತ್ತು ಕರಿಯಮ್ಮ ಹಾಗೂ ವಿಜ್ಞಾನ ವಿಭಾಗದ ಸಾಕ್ಷಿ ಎಸ್, ಆಫ್ರಿನಬಾನು ಮತ್ತು ದರ್ಶನ ಎಸ್ ರಿಗೆ ನಗದು ರೂಪದ ಬಹುಮಾನ ವಿತರಣೆ ಮಾಡಲಾಯಿತು. ತಾಲೂಕ ಮತ್ತು ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಧನೆಗೈದ ಸೃಷ್ಟಿ ಪುಣೇಕರ, ಸೌಜನ್ಯ, ದೀಪಕ ಒಂಟಿಗಡಾದ, ಕಾರ್ತಿಕ ಸಂಗೋಳ್ಳಿಯವರಿಗೆ ಸನ್ಮಾನ ಮಾಡಲಾಯಿತು.
ಭೂಗೋಳಶಾಸ್ತ್ರ ವಿಭಾಗದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ ಪದವಿ ಪಡೆದ ಉಪನ್ಯಾಸಕ ಡಾ. ಅಶೋಕ ಗಡಾದ ಅವರಿಗೆ ಆಡಳಿತ ಮಂಡಳಿಯ ವತಿಯಿಂದ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಪಿ. ಯು ಪ್ರಾಚಾರ್ಯ ಸಂದೀಪ ಬೂದಿಹಾಳ, ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷ ಸುಭಾಷ ಬಿ ಮಾಸಗೋನೆ, ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರ ದೀಪಕ ಒಂಟಿಗಡಾದ, ಸೃಷ್ಠಿ ಪುಣೇಕರ ಸೇರಿದಂತೆ ಪಿಯು ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಕೆ.ಬಿ ಕುರಿ ನಿರೂಪಿಸಿದರು, ಪ್ರಾಚಾರ್ಯ ಸಂದೀಪ ಬೂದಿಹಾಳ ಸ್ವಾಗತಿಸಿ ಪರಿಚಯಿಸಿದರು, ಡಾ. ಅಶೋಕ ಗಡಾದ ವಾರ್ಷಿಕ ವರದಿ ವಾಚನ ಮಾಡಿದರು. ಕವಿತಾ ಬೇಲೆರಿ ಮತ್ತು ಸಿ ವಾಯ್ ಹೊಸಮನಿ ಪಾರಿತೋಷಕ ವಿತರಣೆ ಮಾಡಿಸಿದರು. ಹಾಗೂ ಎನ್ ಡಿ ಹಾದಿಮನಿ ವಂದಿಸಿದರು.