Site icon MOODANA Web Edition

2024-25 ನೇ ಸಾಲಿನಲ್ಲಿ ನಬಾರ್ಡ್‍ನಿಂದ ಒಟ್ಟು ರೂ. 3,97,036.05 ಕೋಟಿ ರೂ.ಗಳ ಆದ್ಯತಾ ಸಾಲ ಗುರಿ: ಡಾ.ಶಾಲಿನಿ ರಜನೀಶ್

ಬೆಂಗಳೂರು, ಜನವರಿ 30 (ಕರ್ನಾಟಕ ವಾರ್ತೆ):

2024-25 ನೇ ಸಾಲಿನಲ್ಲಿ ಒಟ್ಟು ರೂ. 3,97,036.05 ಕೋಟಿ ರೂ.ಗಳ ಆದ್ಯತಾ ವಲಯದ ಸಾಲದ ಗುರಿಯನ್ನು ನಬಾರ್ಡ್ (ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ರಾಷ್ಟ್ರೀಕೃತ ಬ್ಯಾಂಕ್ ) ತನ್ನ ರಾಜ್ಯ ಫೋಕಸ್ ಪೇಪರ್‍ನಲ್ಲಿ ಗುರಿ ಹೊಂದಿದ್ದು, ಆದ್ಯತಾ ವಲಯಗಳಾದ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮುಂತಾದವುಗಳಿಗೆ ಪ್ರಾಶಸ್ತ್ಯ ನೀಡಿ ಆರ್ಥಿಕ ಮಟ್ಟ ಹೆಚ್ಚಿಸಬೇಕು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ಡಾ.ಶಾಲಿನಿ ರಜನೀಶ್ ತಿಳಿಸಿದರು.

ಇಂದು ನಬಾರ್ಡ್‍ನಲ್ಲಿ ಹಮ್ಮಿಕೊಳ್ಳಲಾದ 2024-25ನೇ ಸಾಲಿನ ‘ರಾಜ್ಯ ಸಾಲ ಗೋಷ್ಠಿ’ಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ನಮ್ಮಲ್ಲಿ, ಬಹಳಷ್ಟು ನೈಸರ್ಗಿಕ ಸಂಪನ್ಮೂಲಗಳಿವೆ. ಇವನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಕೃಷಿ, ತೋಟಗಾರಿಕೆ, ಒಳನಾಡು ಮೀನುಗಾರಿಕೆ ಮುಂತಾದ ವಲಯಗಳಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ಹೇಗೆ ರೈತರ ಜನರ ಆದಾಯವನ್ನು ದ್ವಿಗುಣಗೊಳಿಸಬೇಕೆಂಬುದನ್ನು ನಾವು ಅರಿತುಕೊಳ್ಳಬೇಕು ಎಂದರು.

 ಅತಿ ಸಣ್ಣ, ಸಣ್ಣ ಮತ್ತು   ಮಧ್ಯಮ ಕೈಗಾರಿಕೆಗಳ ಬೆಳವಣಿಗೆ ಸಹ ಪ್ರೋತ್ಸಾಹಿಸಬೇಕು. ರೈತರ ಉತ್ಪಾದನಾ ಸಂಸ್ಥೆಗಳ (ಎಫ್‍ಪಿಓ) ಬೆಳವಣಿಗೆಗೆ ಸಹ ನಾವು ಕೈಜೋಡಿಸಬೇಕು. ಬ್ಯಾಂಕಿಂಗ್ ವಲಯದವರು ಆದಷ್ಟು ಜನಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು. ಸರ್ಕಾರ ಹಾಗೂ ಬ್ಯಾಂಕ್‍ಗಳು ಜನರಿಗೆ ಹಲವು ಯೋಜನೆಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೇ ಶೀಘ್ರವಾಗಿ ತಲುಪಿಸುವ ಹೊಣೆ ಹೊರಬೇಕು. ನೂತನ ಡಿಜಿಟಲ್ ತಂತ್ರಜ್ಞಾನವನ್ನು ಜನರು ಬಳಕೆ ಮಾಡಲು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕರ್ನಾಟಕವು 2032 ರ ವೇಳೆಗೆ 1 ಟ್ರಲಿಯನ್ ಜಿಡಿಪಿ  ಆರ್ಥಿಕತೆ ಮುಟ್ಟುವಂತೆ ನಾವು ಶ್ರಮಿಸಬೇಕು. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ರೈತರಿಗೆ ಬೆಳೆ ಬೆಳೆಯಲು ಸಂಯೋಜಿತ ಸಾಲ, ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‍ನ ಕಾರ್ಯನಿರ್ವಾಹಕ ನಿರ್ದೇಶಕರಾದ ಹರ್ದೀಪ್ ಸಿಂಗ್ ಅಹ್ಲುವಾಲಿಯಾ ಮಾತನಾಡಿ, ಆದ್ಯತಾ ವಲಯಗಳ ಸಾಲದ ಅಡಿಯಲ್ಲಿ ಕೃಷಿ ಮೂಲಸೌಕರ್ಯ ಮತ್ತು ಪೂರಕ ಚಟುವಟಿಕೆಗಳು ಸೇರಿದಂತೆ ಕೃಷಿ ಕ್ಷೇತ್ರದ ಪಾಲು ರೂ. 1.85 ಲಕ್ಷ ಕೋಟಿ (46%), ಎಂಎಸ್‍ಎಂಇ ವಲಯಕ್ಕೆ ರೂ.58 ಲಕ್ಷ ಕೋಟಿ (40%) ಮತ್ತು ಇತರ ಆದ್ಯತಾ ವಲಯಗಳಿಗೆ ರೂ.0.54 ಲಕ್ಷ ಕೋಟಿ (14%) ಸಾಲದ ಗುರಿಯನ್ನು ಯೋಜಿಸಲಾಗಿದೆ. ಇದರಿಂದ ರೈತರು ಹಾಗೂ ಬ್ಯಾಂಕಿಂಗ್ ವಲಯ ಎರಡಕ್ಕೂ ಪ್ರಯೋಜನವಾಗುತ್ತದೆ. ರಾಜ್ಯದಲ್ಲಿ ಸಿರಿಧಾನ್ಯ, ಕಾಫಿ, ಹೂವುಗಳು ಹೇರಳವಾಗಿ ಉತ್ಪಾದನೆಗೊಳ್ಳುತ್ತದೆ. ಇವುಗಳ ರಫ್ತು ಕೈಗೊಂಡರೆ ದೇಶಕ್ಕೆ ಲಾಭ ಬರುವುದು ಎಂದರು.

ಭಾರತೀಯ ರಿಸರ್ವ್ ಬ್ಯಾಂಕ್‍ನ ಚೀಫ್ ಜನರಲ್ ಮ್ಯನೇಜರ್ ಪಿ.ಎಸ್.ರಘುನಾಥ್ ಅವರು ಮಾತನಾಡಿ, ತಮ್ಮ ಸಂಸ್ತೆಯಿಂದ ಡಿಜಿಟಲ್ ಪಾವತಿ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಸರ್ಕಾರದ ಯೋಜನೆ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬ್ಯಾಂಕುಗಳು ಕಾರ್ಯೋನ್ಮುಖರಾಗಬೇಕು ಎಂದರು.
ಈ ಸಂದರ್ಭದಲ್ಲಿ 2024-25 ನೇ ಸಾಲಿನ ರಾಜ್ಯ ಫೋಕಸ್ ಪೇಪರ್, ರೈತರ ಉತ್ಪಾದನಾ ಸಂಸ್ಥೆಗಳ ಕುರಿತ ಕೈಪಿಡಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಳೆ ನೀರು ಸ್ಪ್ರಿಂಗ್ ಶೆಡ್ ಅಭಿವೃದ್ಧಿಯ ಕಿರುಚಿತ್ರವನನ್ನು ಅತಿಥಿಗಳು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಇಂಡಿಯಾ ಚೀಫ್ ಜನರಲ್ ಮ್ಯಾನೇಜರ್ ಕೃಷ್ಣನ್ ಶರ್ಮಾ, ನಬಾರ್ಡ್ ಜನರಲ್ ಮ್ಯಾನೇಜರ್ ಮಹೇಶ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version