ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜ.30: ಗ್ರಾಮೀಣ ಪ್ರದೇಶದ ಅಂಗವಿಕಲರು ಸರ್ಕಾರದ ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ವಿಕಲಚೇತನರ ಗ್ರಾಮಸಭೆ ಏರ್ಪಡಿಸಲಾಗಿದೆ ಎಂದು ತಾಪಂ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಮಹಾಂತೇಶ ಕುರ್ತಕೋಟಿ ಹೇಳಿದರು.
ತಾಲೂಕಿನ ಅಂಚಟಗೇರಿ ಗ್ರಾಮ ಪಂಚಾಯತ ವತಿಯಿಂದ ವಿಕಲಚೇತನರಿಗೆ ಏರ್ಪಡಿಸಿದ್ದ ಗ್ರಾಮಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಗವಿಕಲರಿಗೆ ಸಾಕಷ್ಟು ಸೌಲಭ್ಯಗಳಿವೆ ಆದರೆ ಗ್ರಾಮೀಣ ಪ್ರದೇಶದ ಅಂಗವಿಕಲರಿಗೆ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಹಾಗಾಗಿ ಅಂಗವಿಕಲರಿಗೆ ಯೋಜನೆಗಳ ಬಗ್ಗೆ ತಿಳಿಸುವಂತಹ ಕೆಲಸ ವಿಕಲಚೇತನರ ಗ್ರಾಮಸಭೆಯಲ್ಲಿ ಮಾಡಲಾಗುತ್ತಿದೆ ಎಂದರು.
ಅಂಚಟಗೇರಿ ಗ್ರಾಮ ಪಂಚಾಯಿತಿಯ ಪಿಡಿಒ ಎಫ್. ಎಫ್ ಶಿರಗೇರಿ ಮಾತನಾಡಿ, ಅಂಗವಿಕಲರು ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಲು ಹಿಂಜರಿಕೆ ಪಡಬಾರದು. ಸರ್ಕಾರ ಯೋಜನೆಗಳನ್ನು ಜಾರಿಗೆ ತಂದಿರುವ ಉದ್ದೇಶವೇ ಸಾರ್ವಜನಿಕರು, ಅಂಗವಿಕಲರು ಸದುಪಯೋಗ ಪಡೆದುಕೊಳ್ಳಲು ಎಂದರು.
ಗ್ರಾಮ ಪಂಚಾಯತಿಯ ಅಧ್ಯಕ್ಷ ಮಂಜುನಾಥ ತಿಪ್ಪಣ್ಣ ಗಾಣಿಗೇರ, ಗ್ರಾಮ ಪಂಚಾಯತ ಉಪಾಧ್ಯಕ್ಷ ಮಲ್ಲವ್ವ ಯಲ್ಲಪ್ಪ ಜಮ್ಯಾಳ, ಸದಸ್ಯರಾದ ಫಕ್ಕಿರವ್ವ ಸಾದರ, ಮಂಜುಳಾ ಮಾಳಗಿಮನಿ, ನಾಗನಗೌಡರ ಪಾಟೀಲ, ಭೀಮಪ್ಪ ನಾಗಪ್ಪ ವಾಲ್ಮೀಕಿ, ಸಹದೇವಪ್ಪ ದುರ್ಗಪ್ಪ ಮಾಳಗಿ, ವಿ.ಆರ್.ಡಬ್ಲ್ಯೂ ಮಲ್ಲಮ್ಮ ವಾಲ್ಮೀಕಿ, ಎಮ್.ಬಿ.ಕೆ. ರಂಜಿತಾ ಶಿವಳ್ಳಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಗ್ರಾಮೀಣ ಅಂಗವಿಕಲರು ಸೌಲಭ್ಯ ಪಡೆದುಕೊಳ್ಳಿ: ಮಹಾಂತೇಶ ಕುರ್ತಕೋಟಿ
![](https://news.ananddesigns.in/wp-content/uploads/2024/01/grama-sabe-1024x576.jpg)