Site icon MOODANA Web Edition

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಸಿಟ್ಟಿಂಗ್ಸ್ : ಸಾರ್ವಜನಿಕರಿಂದ ದೂರು – ಅಹವಾಲು ಸ್ವೀಕಾರ

ಬೆಂಗಳೂರು, ಜನವರಿ 12 (ಕರ್ನಾಟಕ ವಾರ್ತೆ):

ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ನೊಂದವರಿಗೆ ಸೂಕ್ತ ನೆರವನ್ನು ಒದಗಿಸುವ ನಿಟ್ಟಿನಲ್ಲಿ 1993ರ ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮದ ಅಡಿಯಲ್ಲಿ ಸ್ಥಾಪಿತವಾಗಿರುವ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಜನವರಿ 16 ರಿಂದ 20 ರವರೆಗೆ ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಸಿಟ್ಟಿಂಗ್ಸ್ ನಡೆಸಲು ಉದ್ದೇಶಿಸಿರುತ್ತದೆ.

ಈ ಸಂದರ್ಭದಲ್ಲಿ ಸದರಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಆಯೋಗದಲ್ಲಿ ನೋಂದಣಿಯಾಗಿರುವ ಪ್ರಕರಣಗಳನ್ನು ಆಯಾ ಜಿಲ್ಲೆಗಳಲ್ಲಿ ಇತ್ಯರ್ಥಪಡಿಸಿ, ವಿಲೇ ಮಾಡಲು ಕ್ರಮ ಜರುಗಿಸಲು ಉದ್ದೇಶಿಸಲಾಗಿದೆ. ದೂರುದಾರರು ಹಾಗೂ ಪ್ರತಿವಾದಿ ಪ್ರಾಧಿಕಾರಗಳು ಈ ಸೌಲಭ್ಯದ ಸದುಪಯೋಗಪಡಿಸಿಕೊಳ್ಳಬೇಕೆಂದು ತಿಳಿಸಲಾಗಿದೆ.

ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸದರಿ ಜಿಲ್ಲೆಗಳಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಯಾ ಜಿಲ್ಲೆಗಳಲ್ಲಿಯೇ ಸಾರ್ವಜನಿಕರಿಂದ ದೂರುಗಳು / ಅಹವಾಲುಗಳನ್ನು ಸಹ ಸ್ವೀಕರಿಸಲು ಉದ್ದೇಶಿಸಲಾಗಿದೆ. ಸಾರ್ವಜನಿಕರು ಆಯಾ ಜಿಲ್ಲೆಗಳಲ್ಲಿ ನಿಗದಿತ ದಿನಾಂಕಗಳಂದು ಆಯೋಗದ ಮಾನ್ಯ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಸಂಪರ್ಕಿಸಿ, ದೂರುಗಳನ್ನು ಸಲ್ಲಿಸಬಹುದು.

ಜನವರಿ 16, 17 ಮತ್ತು 20/01/2024 ರಂದು ಕಲಬುರಗಿ ಜಿಲ್ಲೆಯಲ್ಲಿ, ದಿನಾಂಕ 18 ರಂದು ಯಾದಗಿರಿ ಜಿಲ್ಲೆಯಲ್ಲಿ ಮತ್ತು ದಿನಾಂಕ 19 ರಂದು ಬೀದರ್ ಜಿಲ್ಲೆಯಲ್ಲಿ ಸಿಟ್ಟಿಂಗ್ಗಳನ್ನು ನಡೆಸುವುದಾಗಿ ಆಯೋಗದ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version