ಹುಬ್ಬಳ್ಳಿ( ಕರ್ನಾಟಕ ವಾರ್ತೆ) ಜ.11: ಅತಿಯಾದ ಆತ್ಮವಿಶ್ವಾಸವೇ ಅಪಘಾತಕ್ಕೆ ಕಾರಣವಾಗುತ್ತದೆ. ಪ್ರತಿಯೊಬ್ಬ ವಿದ್ಯುತ್ ನೌಕರರು ಕೆಲಸದ ಪ್ರಾರಂಭದಲ್ಲಿ ಆಲೋಚಿಸಿ ನಂತರ ಕೆಲಸಕ್ಕೆ ಮುಂದಾಗಬೇಕು ಎಂದು ಉಪ ಮುಖ್ಯ ವಿದ್ಯುತ್ ಪರಿವೀಕ್ಷಕರಾದ ಚಂದ್ರಶೇಖರ್ ಎಂ.ಕಡಕೋಳ ಅವರು ಹೇಳಿದರು.
ಇಂದು ಗೋಪನಕೊಪ್ಪದ ಕವಿಪ್ರನಿನೌಕರರ ಸಮುದಾಯ ಭವನದಲ್ಲಿ ಹುಬ್ಬಳ್ಳಿ ನಗರ ಮತ್ತು ಗ್ರಾಮೀಣ ವಿಭಾಗದಿಂದ ಆಯೋಜಿಸಿದ ವಿದ್ಯುತ್ ಸುರಕ್ಷತೆ ಹಾಗೂ ಮುಂಜಾಗೃತೆ ಬಗ್ಗೆ ಅರಿವು ಮೂಡಿಸುವ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅತಿಯಾದ ಆತ್ಮವಿಶ್ವಾಸ, ನಿರ್ಲಕ್ಷ, ಸುರಕ್ಷಿತ ಕ್ರಮಗಳನ್ನು ಪಾಲಿಸದಿರುವುದು ಇವು ಅಪಘಾತಕ್ಕೆ ಪ್ರಮುಖವಾದ ಕಾರಣಗಳಾಗಿವೆ. ಸುರಕ್ಷತೆಗೆ ಹೆಚ್ಚು ಒತ್ತು ಕೊಡಬೇಕು. ನೀವು ಸುರಕ್ಷಿತವಾಗಿದ್ದರೆ ನಾವೆಲ್ಲರು ಸುರಕ್ಷಿತರಿರುತ್ತೇವೆ. ಸರ್ಕಾರ ಕೊಟ್ಟ ಉಪಕರಣಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸರ್ಕಾರ ನೀಡಿದ ಸಮವಸ್ತ್ರ, ಶೂ, ಜಾಕೇಟ್ ಮತ್ತು ಹೆಲ್ಮೇಟ್ಗಳನ್ನು ಎಲ್ಲಾ ನೌಕರರು ಕಡ್ಡಾಯವಾಗಿ ಧರಿಸಿಕೊಳ್ಳಬೇಕು. ಇವೆಲ್ಲವು ನಿಮ್ಮ ಸುರಕ್ಷತೆಯ ಸಲುವಾಗಿ ನೀಡಿದವುಗಳಾಗಿವೆ ಎಂದರು.
ಸೈನಿಕರು ಹೇಗೆ ನಮ್ಮ ದೇಶದ ಸಲುವಾಗಿ ದುಡಿಯುತ್ತಾರೋ ಹಾಗೇ ವಿದ್ಯುತ್ ನೌಕರರು ದೇಶದ ಒಳಗಿನ ಜನರ ಸಲುವಾಗಿ ದುಡಿಯುತ್ತಾರೆ. ನೌಕರರು ನಮ್ಮ ದೇಶದ ಸೈನಿಕರಿದ್ದಂತೆ. ಅವರಿಗಾಗೆ ಇನ್ಸ್ಯೂರೆನ್ಸ್ ಮಾಡಿಕೊಡಲಾಗಿದೆ. ಮೃತಪಟ್ಟ ನೌಕರರಿಗೆ 5 ಲಕ್ಷ ಮತ್ತು ಮೇಜರ್ ಪೋಯಿಂಟ್ ನವರಿಗೆ 10 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಕವಿಪ್ರನಿನಿ.ನೌಕರರ ಸಂಘದ ಉಪಾಧ್ಯಕ್ಷರಾದ ವ್ಹಿ.ಎಲ್. ಗುಂಜೀಕರ ಹೇಳಿದರು.
ವಿದ್ಯುತ್ ಸುರಕ್ಷತಾ ಉಪಕರಣಗಳನ್ನು ಬಳಸಿಕೊಳ್ಳಬೇಕು. ಸಾರ್ವಜನಿಕರಿಗೆ ವಿದ್ಯುತ್ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಉಪ ವಿದ್ಯುತ್ ಪರಿವೀಕ್ಷಕರಾದ ಲೋಹಿತ್ ಎಂ. ಕಡಲಾಸ್ಕರ್ ಅವರು ತಿಳಿಸಿದರು.
ಕಾರ್ಯಾಗಾರದಲ್ಲಿ ಕಾ ಮತ್ತು ಪಾ ವೃತ್ತ ಹೆಸ್ಕಾಂನ ಅಧೀಕ್ಷಕ ಇಂಜಿನೀಯರ್ರಾದ ಎಸ್.ಎಸ್.ಜಂಗೀನ, ವಿದ್ಯುತ್ ಪರಿವೀಕ್ಷಕರಾದ ಮಂಜುನಾಥ.ಸಿ.ಹಿರೇಮಠ, ನಗರ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಜಯಪ್ರದಾ, ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ್ ಕಿರಣಕುಮಾರ್.ಬಿ. ಮತ್ತು ವಲಯದ ಶಾಖಾಧಿಕಾರಿಗಳು, ನೌಕರರು ಉಪಸ್ಥಿತರಿದ್ದರು.