ಹುಬ್ಬಳ್ಳಿ ( ಕರ್ನಾಟಕ ವಾರ್ತೆ) ಜ.6: ಕೃತಕ ಬುದ್ಧಿಮತ್ತೆ ಹಾಗೂ ಆಧುನಿಕ ತಂತ್ರಜ್ಞಾನವನ್ನು ಆರೋಗ್ಯ ಸಲಹೆ ನೀಡಲು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಿದೆ. ಟೆಲಿ ಐಸಿಯು ಹಬ್ ಮೂಲಕ ವಿಶೇಷ ಆರೋಗ್ಯ ಸಲಹೆ ನೀಡಬಹುದು. ಗ್ರಾಮ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗೆ ದಾಖಲಾದಾಗ ರೋಗಿಗಳಿಗೆ ಸೂಕ್ತ ರೀತಿಯ ಚಿಕಿತ್ಸಾ ಸಲಹೆ ನೀಡಬಹುದಾಗಿದೆ. ಇದರಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಪ್ರಮಾಣ ಕಡಿಮೆಯಾಗಲಿದೆ. ಟೆಲಿ ಐಸಿಯು ಹಬ್ ಉಪಯೋಗವು ಪರಿಣಾಮಕಾರಿಯಾಗಬೇಕು. ಟೆಲಿ ಐಸಿಯು ಹಬ್ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಹೇಳಿದರು.
ಇಂದು ಕಿಮ್ಸ್ ಆವರಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ 10 ಬೆಡ್ ಐಸಿಯು ಹಬ್ ಉದ್ಘಾಟಿಸಿ ಅವರು ಮಾತನಾಡಿದರು.
ಕಿಮ್ಸ್ ಐಸಿಯು ಹಬ್ ಗೆ 10 ಸ್ಪೋಕ್ ಆಸ್ಪತ್ರೆಗಳು ಒಳಪಟ್ಟಿದ್ದು, ರೋಗಿಗಳ ಜೊತೆ ನೇರವಾಗಿ ಸಂಭಾಷಣೆ ಮಾಡಿ, ಚಿಕಿತ್ಸೆ ನೀಡಬಹುದು. ತಾಲೂಕು ಮಟ್ಟದ ಆಸ್ಪತ್ರೆಗಳಿಗೆ ಉತ್ತಮ ಆರೋಗ್ಯ ಸೌಲಭ್ಯ ಸಿಗಬೇಕು. ಮುಂದಿನ ದಿನಗಳಲ್ಲಿ ಬೆಂಗಳೂರು ಹಾಗೂ ಬಳ್ಳಾರಿ ಹಬ್ಗಳು ಆರಂಭಗೊಳ್ಳಲಿವೆ. ಮುಂದಿನ ತಿಂಗಳಲ್ಲಿ ಪುನೀತ್ ರಾಜ್ಕುಮಾರ್ ಹೃದಯ ಜ್ಯೋತಿ ಯೋಜನೆ ಆರಂಭಿಸಲಾಗುತ್ತದೆ. ಮೊದಲ ಹಂತದಲ್ಲಿ 48 ಆಸ್ಪತ್ರೆ ಹಾಗೂ ಎರಡನೇ ಹಂತದಲ್ಲಿ 41 ಆಸ್ಪತ್ರೆಗಳಲ್ಲಿ ಈ ಯೋಜನೆ ಜಾರಿಯಾಗಲಿದೆ. ಡಯಾಲಿಸಿಸ್ ಸೇರಿದಂತೆ ವಿವಿಧ ಚಿಕಿತ್ಸೆಗಳಿಗೆ ವಿವಿಧ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕಿ ಪುಷ್ಪಲತಾ ಬಿ.ಎಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಟೆಲಿ ಐಸಿಯು ಸೌಲಭ್ಯದಿಂದ ರೋಗಿಗಳು ದಾಖಲಾದ ಆಸ್ಪತ್ರೆಯಿಂದ ಟೆಲಿ ಐಸಿಯು ಹಬ್ನಿಂದ ಮಾಹಿತಿ ಪಡೆದುಕೊಂಡು ಚಿಕಿತ್ಸೆ ಕೊಡಬಹುದು. ತಾಲೂಕು ಆಸ್ಪತ್ರೆಯಲ್ಲಿ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬೇಕು ಎಂಬುದನ್ನು ತಿಳಿಸುವುದರಿಂದ ಜಿಲ್ಲಾಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯನ್ನು ಕಡಿಮೆಗೊಳಿಸಬಹುದಾಗಿದೆ. ನಾಲ್ಕು ವಿಭಾಗವಾರು ಹುಬ್ಬಳ್ಳಿ, ಬಳ್ಳಾರಿ, ಮೈಸೂರು ಹಾಗೂ ಬೆಂಗಳೂರಿನಲ್ಲಿ ಟೆಲಿ ಐಸಿಯು ಹಬ್ ಆರಂಭ ಮಾಡಲಾಗುತ್ತಿದೆ. ಹಬ್ ಗಳಿಂದ ರೋಗಿಗಳಿಗೆ ಬಹಳ ಅನುಕೂಲವಾಗಲಿದೆ ಎಂದರು.
10 ಬೆಡ್ ಐಸಿಯು ಮುಖ್ಯಸ್ಥರಾದ ಶ್ರೀಕಾಂತ ನಾದಮುನಿ ಮಾತನಾಡಿ, ರಾಜ್ಯದ 41 ಆಸ್ಪತ್ರೆಗಳಿಗೆ ಟೆಲಿ ಐಸಿಯು ಸೌಲಭ್ಯ ಒದಗಿಸಲಾಗಿದ್ದು, ರೋಗಿಗಳ ಗುಣಮುಖ ಪ್ರಮಾಣವನ್ನು ಸಹ ಸಂಗ್ರಹಿಸಲಾಗುತ್ತದೆ. ಕೋವಿಡ್ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಕೇರ್ ಸಾಫ್ಟವೇರ್ ಮೂಲಕ ರೋಗಿಗಳ ಸ್ಥಿತಿಗತಿಗಳ ಹಾಗೂ ಚಿಕಿತ್ಸೆ ನೀಡುವುದನ್ನು ಮಾಡಬಹುದಾಗಿದೆ. ವಾಟ್ಸ್ ಅಪ್ ಮೂಲಕ ರೋಗಿಗಳು ಹಾಗೂ ವೈದ್ಯರ ಜೊತೆ ನೇರವಾಗಿ ಸಂಭಾಷಣೆ ನಡೆಸಬಹುದಾಗಿದೆ. ಮೈಸೂರು ಹಬ್ ಆರಂಭವಾಗಿದ್ದು, ಇಂದು ಕಿಮ್ಸ್ ಹಬ್ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು, ಬಳ್ಳಾರಿ ಹಬ್ ಗಳು ಆರಂಭವಾಗಬೇಕಿದೆ. ಕಿಮ್ಸ್ ಹಬ್ ಗೆ ಬಸವನ ಬಾಗೇವಾಡಿ, ಜಮಖಂಡಿ, ಸವದತ್ತಿ, ಗೋಕಾಕ, ನರಗುಂದ, ಕುಂದಗೋಳ, ಶಿಗ್ಗಾಂವ, ಯಲ್ಲಾಪುರ, ಭಟ್ಕಳ, ಹಾವೇರಿ ಆಸ್ಪತ್ರೆಗಳು ಒಳಗೊಂಡಿವೆ. ಈಗಾಗಲೇ 10 ಸಾವಿರಕ್ಕೂ ಅಧಿಕ ರೋಗಿಗಳಿಗೆ ಮಾಹಿತಿ ನೀಡಲಾಗಿದೆ. ದೇಶದ 9 ರಾಜ್ಯದ 209 ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ಹಬ್ ಆರಂಭಿಸಲಾಗಿದೆ. ಆಧುನಿಕ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್, ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಜಗದೀಶ್ ಶೆಟ್ಟರ್, ಶಾಸಕರಾದಎನ್.ಎಚ್.ಕೋನರೆಡ್ಡಿ, ಪ್ರಸಾದ್ ಅಬ್ಬಯ್ಯ, ಮಹೇಶ್ ಟೆಂಗಿನಕಾಯಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ರಂದೀಪ್ ಡಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ, ಕಿಮ್ಸ್ ನಿರ್ದೇಶಕರಾದ ಎಸ್.ಎಫ್. ಕಮ್ಮಾರ, ಕಿಮ್ಸ್ ಪ್ರಾಚಾರ್ಯರಾದ ಡಾ.ಈಶ್ವರ ಹೊಸಮನಿ, ಡಾ.ರಾಮಲಿಂಗಪ್ಪ ಅಂಟರತಾನಿ, ರಾಜಶೇಖರ ದ್ಯಾಬೇರಿ, ವೈದ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.




