ಬೆಂಗಳೂರು, ಜನವರಿ 03 (ಕರ್ನಾಟಕ ವಾರ್ತೆ):
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಹವಾನಿಯಂತ್ರಿತ ವಜ್ರ ಸೇವೆಗಳಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಿಂದ ವಂಡರ್-ಲಾ ಮನರಂಜನಾ ಉದ್ಯಾನವನಕ್ಕೆ ಸಂಚರಿಸುವ ಪ್ರಯಾಣಿಕರಿಗೆ ಅವತಾರ್ ತಂತ್ರಾಂಶದಲ್ಲಿ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಜನವರಿ 15 ರಿಂದ ಅನುಷ್ಠಾನಗೊಳಿಸಲಾಗುವುದು.
ನಗರದ ವಿವಿಧ ಭಾಗಗಳಿಂದ ವಂಡರ್-ಲಾ ಮನರಂಜನಾ ಉದ್ಯಾನವನಕ್ಕೆ 4 ಮಾರ್ಗಗಳಲ್ಲಿ 10 ಅನುಸೂಚಿಗಳಿಂದ 20 ಏಕಮುಖ ಸುತ್ತುವಳಿಗಳ ಮೂಲಕ ಹವಾನಿಯಂತ್ರಿತ ವಜ್ರ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.
ಮುಂಗಡ ಬುಕ್ಕಿಂಗ್ ಸೌಲಬ್ಯ ಕಲ್ಪಿಸಿರುವ ಮಾರ್ಗ ಸಂಖ್ಯೆ – ವಿ-226 ಕೆಬಿಎಸ್, ಕೆಂಪೇಗೌಡ ಬಸ್ ನಿಲ್ದಾಣದಿಂದ ವಂಡರ್ ಲಾ ಮನರಂಜನಾ ಉದ್ಯಾನವನಕ್ಕೆ ಕಾಟನ್ಪೇಟೆ ಆಸ್ಪತ್ರೆ, ಸಿರ್ಸಿ ಸರ್ಕಲ್, ಮೈಸೂರು ರಸ್ತೆ ಬಸ್ ನಿಲ್ದಾಣ, ನಾಯಂಡಹಳ್ಳಿ , ಕೆಂಗೇರಿ ಮಾರ್ಗವಾಗಿ ಹೊರಡಲಿದೆ.
ವಂಡರ್- ಲಾ ಗೆ ಕಾರ್ಯಾಚರಿಸುವ ವಜ್ರ ಸಾರಿಗೆಗಳಲ್ಲಿ ಟಿಕೇಟ್ ಖರೀದಿಸಿ ಪ್ರಯಾಣ ಮಾಡಿದ ಪ್ರತಿ ಪ್ರಯಾಣಿಕರಿಗೆ ವಂಡರ್ ಲಾ ಸಂಸ್ಥೆಯ ಪ್ರವೇಶ ಶುಲ್ಕದಲ್ಲಿ ಶೇ. 15 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಜಾಲತಾಣ www.ksrtc.in, ಗೆ ಸಂಪರ್ಕಿಸುವುದು.
ಪ್ರಮುಖ ನಿಯಮಗಳು ಮತ್ತು ಷರತ್ತುಗಳು:
ಮುಂಗಡವಾಗಿ ಆಸನಗಳನ್ನು ಕೆಎಸ್ಆರ್ಟಿಸಿ ಬುಕ್ಕಿಂಗ್ ಕೌಂಟರ್ಗಳು, ಆನ್ಲೈನ್ www.ksrtc.in, ಕೆಎಸ್ಆರ್ಟಿಸಿ ಮೊಬೈಲ್ ಆಪ್ ಹಾಗೂ ಅಧಿಕೃತ ಖಾಸಗಿ ಏಜೆನ್ಸಿಗಳ ಮೂಲಕ ಕಾಯ್ದಿರಿಸಬಹುದು.
ಒಂದೇ ಗುಂಪಿನ 4 ಅಥವಾ ಅಧಿಕ ಪ್ರಯಾಣಿಕರು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಿದಲ್ಲಿ, ಪ್ರಯಾಣ ದರದಲ್ಲಿ ಶೇ. 5 ರಷ್ಟು ರಿಯಾಯಿತಿಯನ್ನು ಇ-ಬುಕ್ಕಿಂಗ್ ಸಮಯದಲ್ಲಿ ನೀಡಲಾಗುತ್ತದೆ. ಹೋಗುವ ಹಾಗೂ ಹಿಂದಿರುಗುವ ಪ್ರಯಾಣಕ್ಕೆ ಒಂದೇ ವಹಿವಾಟಿನಲ್ಲಿ ಮುಂಗಡ ಟಿಕೇಟ್ ಕಾಯ್ದಿರಿಸಿದಲ್ಲಿ, ಮೂಲ ಪ್ರಯಾಣ ದರದಲ್ಲಿ ಶೇ. 10 ರಷ್ಟು ರಿಯಾಯಿತಿಯನ್ನು ಇ-ಬುಕ್ಕಿಂಗ್ ಸಮಯದಲ್ಲಿ ನೀಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.




