32.6 C
Karnataka
Sunday, March 22, 2026
spot_img

ಲಿಂಗರಾಜನಗರದಲ್ಲಿ ವಿನೂತನ ರೀತಿಯಲ್ಲಿ ಹೊಸ ವರ್ಷಾಚರಣೆ

ಹುಬ್ಬಳ್ಳಿ: ಇಲ್ಲಿನ ಲಿಂಗರಾಜ ನಗರದ ನಾಗರಿಕರು ಹು .ಧಾ.ಮ.ನ.ಪಾಲಿಕೆಗೆ ಸೇರಿದ ಉದ್ಯಾನದಲ್ಲಿ ಪಂಚವಟಿ ವೃಕ್ಷಗಳ ಸಸಿಗಳನ್ನು ನೆಡುವುದರ ಮೂಲಕ ಹೊಸ ವರ್ಷವನ್ನು ವಿನೂತನವಾಗಿ ಸ್ವಾಗತಿಸಿದರು. 

ಶ್ರೀ ಕಟ್ಟಿ ಮಂಗಳಾದೇವಿ ದೇವಸ್ಥಾನ ಹಾಗೂ ಶ್ರೀ ವೀರಾಂಜನೇಯ ದೇವಸ್ಥಾನ ಸಮಿತಿ ಅಧ್ಯಕ್ಷ ಪ್ರೊ. ಜಿ.ವಿ. ವಲಸಂಗ ಅವರು ಮಾತನಾಡಿ  ಮಂಗಳಾದೇವಿ ಜಾತ್ರೋತ್ಸವದ ಬೆಳ್ಳಿ ಹಬ್ಬ ವರ್ಷಾಚರಣೆಯ ಅಂಗವಾಗಿ ಉದ್ಯಾನದಲ್ಲಿ ಪಂಚವಟಿ ಸಸಿಗಳನ್ನು ನೆಡುವುದರ ಮೂಲಕ ‘ಆಮ್ಲಜನಕ ಗೋಪುರ’ವನ್ನು ವರದಶ್ರೀ ಫೌಂಡೇಶನ್ ನ ಸಹಯೋಗದಲ್ಲಿ  ಪ್ರತಿಸ್ಥಾಪಿಸಲಾಗುತ್ತಿದೆ; ಇದರಿಂದ ಬಡಾವಣೆಯ ನಿವಾಸಿಗಳ ಮಾನಸಿಕ ಹಾಗೂ ಶಾರೀರಿಕ ಅರೋಗ್ಯ ವೃದ್ಧಿಯಾಗಲಿದೆ ಎಂದರು. 

ಬಡಾವಣೆಯ ಹಿರಿಯ ನಾಗರಿಕರಾದ ನಾಗರಾಜ ಕಲಾಲ್, ಅರವಿಂದ ಕಾಮತ್, ಶಿವಶಂಕರ ಹಿರೇಮಠ, ಹೆಚ್. ಬಿ. ಲಿಂಗಾರೆಡ್ಡಿ ಅವರು ಸ್ವಯಂಸ್ಫೂರ್ತಿ‍ಯಿಂದ ಉದ್ಯಾನ ನಿರ್ವಹಣೆ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಬಡಾವಣೆಯ ಎಲ್ಲ  ಉದ್ಯಾನಗಳಲ್ಲಿ ನಾಗರಿಕರ  ‘ಆಮ್ಲಜನಕ ಗೋಪುರ’ಗಳನ್ನೂ ಪ್ರತಿಷ್ಟಾಪಿಸುವ ಯೋಚನೆ ಇದೆ ಎಂದರು. 

ವರದಶ್ರಿ ಫೌಂಡೇಷನ್ ನ ಸಂಸ್ಥಾಪಕ ಮಲ್ಲಿಕಾರ್ಜುನ್ ರಡ್ಡೇರ್ ಮಾತನಾಡಿ ಅರಳಿ, ಅತ್ತಿ, ಬಿಲ್ವ, ಬನ್ನಿ, ಬೇವಿನ ಮರಗಳ ಸಸಿಗಳು ಸಾಕಷ್ಟು ಆಮ್ಲಜನಕ ಬಿಡುಗಡೆ ಮಾಡುತ್ತವೆಯಲ್ಲದೇ ಮಹಿಳೆಯರು, ಹಿರಿಯರೂ ಸೇರಿದಂತೆ ಎಲ್ಲರ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತವೆ; ಈ ಸಸಿಗಳನ್ನು ಬಡಾವಣೆಗಳ ಉದ್ಯಾನ, ಶಾಲಾ-ಕಾಲೇಜುಗಳ ಉದ್ಯಾನ, ಮನೆ ಮುಂದಿನ ಉದ್ಯಾನಗಳಲ್ಲಿ ನೆಟ್ಟು ಬೆಳೆಸಬಹುದಾಗಿದೆ; ಪ್ರಾಚೀನ ಕಾಲದಲ್ಲಿ ಋಷಿಗಳು ಈ ಮರಗಳ ಅಡಿಯಲ್ಲಿಯೇ ತಪಸ್ಸು ಮಾಡಿ ಏಕಾಗ್ರತೆ ಸಾಧಿಸುತ್ತಿದ್ದರು ಎಂದು ತಿಳಿಸಿದರು. 

ಫೌಂಡೇಶನ್ ನ ಸಿದ್ದು ಅವರು ಪಂಚವಟಿ ಸಸಿ ನೆಡುವ ಮುನ್ನ ಪೂಜೆ ಸಲ್ಲಿಸಿದರು. ಬಡಾವಣೆಯ ನಾಗರಿಕರಾದ ಸಾಹೇಬಗೌಡ ಪಾಟೀಲ್, ಎಂ. ಎ. ಚೆನ್ನಶೆಟ್ಟಿ, ಜಿ.ಆರ್. ಸಾಲಿಮಠ, ಕೆ. ಎಸ. ಕೌಜಲಗಿ, ಚೌಡಾಪುರ, ಆರ್. ವಿ. ಪಾಟೀಲ್, ಎ. ಎಸ್. ಟಿಕಳೆ ಮತ್ತಿತರರು ಉಪಸ್ಥಿತರಿದ್ದರು. 

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!