Site icon MOODANA Web Edition

ಕೋವಿಡ್ ಟಾಸ್ಕ್ ಪೊರ್ಸ್ ಸಭೆಹೊಸ ತಳಿ ಕೋವಿಡ್ ಮುಂಜಾಗೃತಾ ಕ್ರಮಕ್ಕೆ ಅಧಿಕಾರಿಗಳು ಸನ್ನದ್ಧರಾಗಬೇಕಿದೆ.-ಹುಬ್ಬಳ್ಳಿ ನಗರ ತಹಸೀಲ್ದಾರ ಕಲಗೌಡ್ರ ಪಾಟೀಲ

ಹುಬ್ಬಳ್ಳಿ (ಕರ್ನಾಟಕವಾತೆ) ಡಿ.27: ಸುಮಾರು 3 ವರ್ಷಗಳಿಂದ ಕರೋನ ಎಂಬ ಮಹಾಮಾರಿಯು ಮಾನವ ಸಂಕುಲವನ್ನು ಬಾದಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೋವಿಡ್ ಸೋಂಕು ಪ್ರಪಂಚ ಸೇರಿದಂತೆ ದೇಶದಾದ್ಯಂತ ಮತ್ತೆ ವ್ಯಾಪಕವಾಗಿ ಹರಡಲು ಪ್ರಾರಂಭಿಸಿದೆ. ಹೊಸ ತಳಿಯ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ವೈದ್ಯಾಧಿಕಾರಿಗಳು ಸನ್ನದ್ಧರಾಗಬೇಕಿದೆ. ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಾಧಿಕಾರಿಗಳೊಂದಿಗೆ ಹುಬ್ಬಳ್ಳಿ ತಾಲೂಕಾಡಳಿತವು ಕೈಜೋಡಿಸುತ್ತಿದೆ ಎಂದು ಹುಬ್ಬಳ್ಳಿ ನಗರ ತಹಸೀಲ್ದಾರ ಮತ್ತು ಕಾರ್ಯ ನಿರ್ವಾಹಕ ಅಧಿಕಾರಿ ಕಲಗೌಡ್ರ ಪಾಟೀಲ ಹೇಳಿದರು.
ಕರೋನ ಹರಡುವಿಕೆ ಮುಂಜಾಗೃತ ಕ್ರಮವಾಗಿ ಇಂದು ಹುಬ್ಬಳ್ಳಿ ತಾಲೂಕು ತಹಸೀಲ್ದಾರ ಕಾರ್ಯಾಲಯದ ಸಭಾಭವನದಲ್ಲಿ ಏರ್ಪಡಿಸಲಾದ ಕೋವಿಡ್ ಟಾಸ್ಕ್ ಪೊರ್ಸ್ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ತಾಲೂಕಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾಸ್ಕ್, ಸ್ಯಾನಿಟೈಸರ್, ಪಲ್ಸ್ ಎಕ್ಸಿಮೀಟರ್, ವೆಂಟಿಲೆಟರ್, ಆಕ್ಸಿಜನ್ ಸೇರಿದಂತೆ ಕೋವಿಡ್ ಕಿಟ್‍ಗಳಲ್ಲಿ ಕೊರತೆಯಾಗದಂತೆ ಎಲ್ಲ ವೈದ್ಯಾಧಿಕಾರಿಗಳು ಮುಂಜಾಗೃತೆ ವಹಿಸಬೇಕು.
ನಗರ ಹಾಗೂ ಗ್ರಾಮೀಣ ಸೇರಿದಂತೆ 60 ವರ್ಷ ಮೇಲ್ಪಟ್ಟವರ ಹಾಗೂ ಗರ್ಭಿಣಿ ಹೆಂಗಸರ ಹೆಸರನ್ನು ಪ್ರತ್ಯೇಖವಾಗಿ ಪಟ್ಟಿಮಾಡಿ ವರದಿ ಸಲ್ಲಿಸಬೇಕು. ಆಸ್ಪತ್ರೆಗೆ ಬರುವ ರೋಗಿಗಳ ತಪಾಸಣೆ ಮತ್ತು ರೋಗಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಎಚ್ಚರಿಕೆ ವಹಿಸಬೇಕು.
ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರ ಹೊಸಮನಿ ಅವರು ಮಾತನಾಡಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳನ್ನು ಹಂಚುವುದು, ಧ್ವನಿ ಮುದ್ರಿಕೆ ಅಳಡಿಕೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಸಂಜೀವಿನಿ ಸಖಿಯರ ಮೂಲಕ ಕೋವಿಡ್ ಮಂಜಾಗೃತೆ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ ನಾಶಿ ಅವರು ಮಾತನಾಡಿ ಅವಧಿ ಮೀರಿದ ಸ್ಯಾನಿಟೈಸರ್, ಕೋವಿಡ್ ಕಿಟ್‍ಗಳನ್ನು ಕೂಡಲೆ ತೆರವುಗೊಳಿಸಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ಎಲ್ಲ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಅಂಬುಲೆನ್ಸ್ ಸೌಲಭ್ಯ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಮೂಲಕ ರೋಗಿಗಳಿಗೆ ತೊಂದರೆ ಉಂಟಾಗದಂತೆ ಜವಾಬ್ದಾರಿ ವಹಿಸಬೇಕು.
ತಾಲೂಕು ವೈದ್ಯಾಧಿಕಾರಿ ವಿಜಯ ಲಕ್ಷ್ಮಿ ಸೊಪ್ಪಿನ್ ಅವರು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಮುಂಜಾಗೃತಾ ಕ್ರಮಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಆಡಳಿತ ವೈದ್ಯಾಧಿಕಾರಿಗಳಾದ ಡಾ. ಎಮ್.ಡಿ. ಫಾರೇಕ, ಡಾ. ಹುಲಗಣ್ಣ ಇಂಜಗರಿ, ಡಾ. ರೆಬೆಕಾ ಹೊಂಬಳ, ಡಾ. ಸೋಫಿಯಾ ದಾಸರಿ, ಡಾ. ಗೀತಾ ನಾಯ್ಕರ, ವೈದ್ಯಾಧಿಕಾರಿಗಳಾದ ಡಾ. ನೀಲಾ ಹೂಲಿ, ಡಾ. ಪ್ರಕಾಶ ನರಗುಂದ, ಡಾ. ಸತೀಶ ಶಿರಹಟ್ಟಿ, ಡಾ. ಎಸ್.ಕಟ್ಟಿ, ಡಾ. ಟಿ. ಮನಿಯಾರ, ಡಾ. ಬಸವರಾಜ ಕಮಡೊಳ್ಳಿ, ಡಾ. ದಾನಿ, ರೇಖಾ ಬಾಡಗಿ ಮತ್ತು ಸರೋಜಾ ಹಂಪಣ್ಣವರ ಹಾಜರಿದ್ದರು.

Exit mobile version