30.2 C
Karnataka
Sunday, March 22, 2026
spot_img

ಹುಬ್ಬಳ್ಳಿ ಧಾರವಾಡ ನಾಗರಿಕರ ವಾರ್ಡ್ ಸಮಿತಿ ಬಳಗದ ವತಿಯಿಂದ ಸಚಿವರಿಗೆ ಮರುಜ್ಞಾಪನಾ ಮನವಿ ಪತ್ರ

ಧಾರವಾಡ : ಹುಬ್ಬಳ್ಳಿ ಧಾರವಾಡ ನಾಗರಿಕರ ವಾರ್ಡ್ ಸಮಿತಿ ಬಳಗದ ವತಿಯಿಂದ ಇಂದು ಧಾರವಾಡದಲ್ಲಿ ಜರುಗಿದ ಜನತಾದರ್ಶನ ಕಾರ್ಯಕ್ರಮದಲ್ಲಿ ಸತತವಾಗಿ ಮೂರನೇ ಬಾರಿಗೆ ಬಳಗದ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮರುಜ್ಞಾಪನಾ ಮನವಿ ಪತ್ರ ಅರ್ಪಿಸಿ, ಅತಿ ವಿಳಂಬವಾಗುತ್ತಿರುವ ಶಾಸನಾತ್ಮಕವಾಗಿ ಕಡ್ಡಾಯವಾದ ನಾಗರಿಕರ ವಾರ್ಡ ಸಮಿತಿ ರಚನೆಗಾಗಿ ಆಗ್ರಹಿಸಿದರು.

“ಹೌದು, ನಿಮ್ಮ ಬೇಡಿಕೆ ನ್ಯಾಯಯುತವಾಗಿದ್ದು, ನಿಮ್ಮ ನಾಗರಿಕರ ಬಳಗದ ನಿಯೋಗ ಸತತವಾಗಿ ಮೂರನೇ ಬಾರಿ ಜನತಾದರ್ಶನದಲ್ಲಿ ನನ್ನನ್ನು ಭೇಟಿ ಮಾಡಿ ವಾರ್ಡ್ ಸಮಿತಿ ರಚನೆಗಾಗಿ ಮನವಿ ಅರ್ಪಿಸಿದ್ದೀರಿ, ಆದರೆ ಇದುವರೆಗೆ ನಾನು ಈ ಕುರಿತು ವಿಶೇಷವಾದ ಗಮನಹರಿಸಿರಲಿಲ್ಲ ಅದಕ್ಕಾಗಿ ಖೇದ ವ್ಯಕ್ತಪಡಿಸುತ್ತೇನೆ. ಸಂವಿಧಾನಾತ್ಮಕವಾಗಿ ಶಾಸನಾತ್ಮಕವಾಗಿ ಕಡ್ಡಾಯವಾದ ನಾಗರಿಕರ ವಾರ್ಡ್ ಸಮಿತಿ ರಚನೆ ಪ್ರಕ್ರಿಯೆಯಲ್ಲಿ ಎಲ್ಲ ತರಹದ ಅಡಚಣೆಗಳನ್ನು ನಿವಾರಿಸಿ ಅತಿ ಶೀಘ್ರದಲ್ಲಿ ವಾರ್ಡ್ ಸಮಿತಿ ರಚನೆ ಘೋಷಣೆ ಮಾಡಲಾಗುವುದು. ಈ ಕುರಿತ ವಿಷಯವನ್ನು ಆದ್ಯತೆಯಾಗಿ ಪರಿಗಣಿಸಿ ಸಚಿವ ಸಂಪುಟ ಸಭೆಯಲ್ಲಿಯೂ ಕೂಡ ಪ್ರಸ್ತಾಪಿಸಲಿದ್ದೇನೆ” ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾರ್ಮಿಕ ಸಚಿವರು ಆದ ಸಂತೋಷ್ ಲಾಡ್ ರವರು ನಾಗರಿಕರ ಬಳಗದ ನಿಯೋಗಕ್ಕೆ ಭರವಸೆ ನೀಡಿದರು.

ಈಗಾಗಲೇ, ಮೇ 2023 ತಿಂಗಳಿನ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯದ ಠರಾವಿನ ಮೂಲಕ ಪಾಲಿಕೆ ಆಯುಕ್ತರಿಗೆ ಅಗಸ್ಟ್ 15 2023 ಒಳಗಾಗಿ ಅವಳಿ ನಗರಗಳಾದ್ಯಂತ ನಾಗರಿಕರ ವಾರ್ಡ್ ಸಮಿತಿ ರಚನೆ ಮಾಡಬೇಕೆಂದು ನಿರ್ದೇಶಿಸಲಾಗಿತ್ತು.. ತದನಂತರ, ಬಳಗದ ಒತ್ತಾಯದ ಮೇರೆಗೆ ಸ್ಥಳೀಯ 9 ಜನಪ್ರತಿನಿಧಿಗಳಾದ ಸಂಸದರು, ಶಾಸಕರು (ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು) ವಿಧಾನ ಪರಿಷತ್ ಸಭಾಪತಿಗಳು ಪಾಲಿಕೆ ಆಯುಕ್ತರನ್ನು ಉದ್ದೇಶಿಸಿ ತಕ್ಷಣವೇ ಶಾಸನಾತ್ಮಕವಾಗಿ ಕಡ್ಡಾಯವಾದ ನಾಗರಿಕರ ವಾರ್ಡ್ ಸಮಿತಿ ರಚನೆ ಮಾಡಬೇಕೆಂದು ನಿರ್ದೇಶನ ಪತ್ರ ಬರೆದಿರುತ್ತಾರೆ. ಅಷ್ಟೇ ಅಲ್ಲದೆ, ಬಳಗದ ನಿಯೋಗವು ಬೆಂಗಳೂರಿನ ವಿಧಾನಸಭೆಗೆ ತೆರಳಿ ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರು, ಪೌರಾಡಳಿತ ಇಲಾಖೆ ಸಚಿವರು ಮತ್ತು ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳನ್ನು ಕಂಡು ಬೇಡಿಕೆಯ ವಿಷಯವನ್ನು ಚರ್ಚಿಸಿ ಮನವಿ ಪತ್ರ ಅರ್ಪಿಸಿದ್ದರು. ಇದರ ಮುಂದುವರಿದ ಭಾಗವಾಗಿ ಇಂದು ಬಳಗದ ನಿಯೋಗವು ಸತತ ಮೂರನೇ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಜನತಾದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇನ್ನು ಹೆಚ್ಚಿನ ವಿಳಂಬ ಮಾಡದೆ ತಕ್ಷಣವಾಗಿ ಶಾಸನಾತ್ಮಕವಾಗಿ ಕಡ್ಡಾಯವಾದ ನಾಗರಿಕರ ವರ್ಡ್ ಸಮಿತಿ ರಚನೆ ಮಾಡಲು ಪಾಲಿಕೆ ಆಯುಕ್ತರಿಗೆ ನಿರ್ದೇಶಿಸಬೇಕೆಂದು ಒತ್ತಾಯಿಸಿ ಮನವಿ ಪತ್ರವನ್ನು ಅರ್ಪಿಸಲಾಯಿತು.

ವಾರ್ಡ್ ಸಮಿತಿ ಬಳಗದ ಸಂಚಾಲಕ ಲಿಂಗರಾಜ್ ಧಾರವಾಡ ಶೆಟ್ಟರ್, ಡಾ. ಸುಭಾಷ್ ಬಬ್ರುವಾಡ, ಶಿವಶಂಕರ ಐಹೊಳೆ ಶಿವಾನಂದ ಬೆಳವಟಗಿ, ಶರಣಗೌಡ, ಸುಧೀರ್ ಅಂಬೇಕರ, ಮೃತ್ಯುಂಜಯ ಮಲ್ಲಾಪುರ್, ಎಸ್ ಎಸ್ ಅಂಗಡಿ, ಪರಶುರಾಮ್ ಕೆಂಗಾರ್ ವಿನಾಯಕ ತಾಪಸ ಮುಂತಾದವರು ಉಪಸ್ಥಿತರಿದ್ದರು ಎಂದು ಹುಬ್ಬಳ್ಳಿ ಧಾರವಾಡ ನಾಗರಿಕರ ವಾರ್ಡ್ ಸಮಿತಿ ಬಳಗದ ಸಂಚಾಲಕರಾದ ಲಿಂಗರಾಜ ಧಾರವಾಡಶೆಟ್ಟರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!