28.5 C
Karnataka
Sunday, March 22, 2026
spot_img

ಬೆಂಗಳೂರು ನಗರವನ್ನು ಮಾಲಿನ್ಯ ಮುಕ್ತವಾಗಿರಿಸಿ – ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು, ಡಿಸೆಂಬರ್ 01 (ಕರ್ನಾಟಕ ವಾರ್ತೆ) :
ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರವನ್ನು ಮಾಲಿನ್ಯ ಮುಕ್ತವನ್ನಾಗಿ ಮಾಡಿ ಮುಂದಿನ ಯುವ ಪೀಳಿಗೆಗೆ ಉತ್ತಮ ವಾತವರಣ ನಿರ್ಮಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಮದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಅವರು ಇಂದು ನೃಪತುಂಗ ರಸ್ತೆಯ ಯವನಿಕ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ಸಮಾರೋಪ ಸಮಾರಂಭ-2023 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಬೆಂಗಳೂರಿನಲ್ಲಿ ಜಲ ಮಾಲಿನ್ಯ, ವಾಯುಮಾಲಿನ್ಯ ಹಾಗೂ ಶಬ್ದಮಾಲಿನ್ಯವೂ ಸಹ ಹೆಚ್ಚುತ್ತಿದೆ. ನಗರೀಕರಣ, ಹೆಚ್ಚುತ್ತಿರುವ ವಾಹನಗಳು, ಜನಸಂಖ್ಯೆಯಿಂದ ವಾಯುಮಾಲಿನ್ಯ ಉಂಟಾಗುತ್ತಿದೆ. ನಾವು ಆದಷ್ಟು ವಿದ್ಯುತ್‍ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾದ ಖ್ಯಾತ ಚಲನಚಿತ್ರ ನಟಿ ಐಂದ್ರಿತ ರೈ ಮಾತನಾಡಿ, ದೇಶದಲ್ಲಿ ಮಾಲಿನ್ಯ ಹೊಂದಿದ ನಗರಗಳಲ್ಲಿ ಬೆಂಗಳೂರು 5ನೇ ಸ್ಥಾನವನ್ನು ಹೊಂದಿದೆ. ದೀಪಾವಳಿಯ ಸಂದರ್ಭದಲ್ಲಿ ಉಂಟಾದ ಶಬ್ದ ಹಾಗೂ ವಾಯುಮಾಲಿನ್ಯದಿಂದ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತಲ್ಲದೆ, ಪ್ರಾಣಿಗಳಿಗೂ ತೊಂದರೆ ಉಂಟಾಯಿತು. ನಾವು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಲು ರೂಢಿ ಮಾಡಿಕೊಳ್ಳಬೇಕು. ಹಾಗೆಯೇ ಸೈಕ್ಲಿಂಗ್, ವಾಯು ವಿಹಾರ ಮಾಡಿ ದೇಹದ ಸ್ವಾಸ್ಥ್ಯ ಕಾಪಾಡಬೇಕು ಎಂದು ತಿಳಿಸಿದರು.
ಪ್ರೊ. ಡಾ. ಹೆಚ್. ಪರಮೇಶ್ ಅವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿ, ವಾಯುಮಾಲಿನ್ಯ ನಿಧಾನಗತಿಯಲ್ಲಿ ಮನುಷ್ಯನನ್ನು ಕೊಲ್ಲುತ್ತದೆ. ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳು, ಸ್ನಾಯು ಸೆಳೆತ, ಅಸ್ತಮಾ ಕಾಯಿಲೆಗಳು ವಾಯು ಮಾಲಿನ್ಯದಿಂದ ಉಂಟಾಗುತ್ತದೆ. ನಾವು ವ್ಯಾಯಾಮ ಮಾಡುವುದರ ಜೊತೆಗೆ ಶುದ್ಧ ಆಮ್ಲಜನಕ ಹಾಗೂ ಉತ್ತಮ ಆಹಾರ ಸೇವಿಸಿದರೆ ಆರೋಗ್ಯವನ್ನು ಹೊಂದಬಹುದು ಎಂದರು.

ಇದೇ ಸಂದರ್ಭದಲ್ಲಿ ಸಾರಿಗೆ ಇಲಾಖೆಯು ಹೊರತಂದ “ಹಸಿರಾಗುವ – ಉಸಿರಾಗುವ” ಮಾಹಿತಿ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಮಾಸಾಚರಣೆ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿಗಳಾದ ಎನ್.ವಿ. ಪ್ರಸಾದ್, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಕಾರ್ಯದರ್ಶಿಗಳಾದ ಎ.ಎಂ ಯೋಗೀಶ್, ಅಪರ ಸಾರಿಗೆ ಆಯುಕ್ತರಾದ ಬಿ.ಪಿ. ಉಮಾಶಂಕರ್, ಜೆ. ಜ್ಞಾನೇಂದ್ರ ಕುಮಾರ್, ಜೆ. ಪುರುಷೋತ್ತಮ್, ಸಿ.ಮಲ್ಲಿಕಾರ್ಜುನ್, ಜಂಟಿ ಸಾರಿಗೆ ಆಯುಕ್ತರಾದ ಎಂ. ಶೋಭ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

spot_img
spot_img
spot_img
spot_img
spot_img
spot_img

Related Articles

- Advertisement -spot_img

Latest Articles

error: Content is protected !!