ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.22: ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯನ್ನು ನವೆಂಬರ್ 30 ರಂದು ತಾಲೂಕು ಆಡಳಿತದಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ಗ್ರೇಡ್ 2 ತಹಸೀಲ್ದಾರರಾದ ಜಿ. ವಿ.ಪಾಟೀಲ್ ಹೇಳಿದರು.
ಇಂದು ತಾಲೂಕು ಆಡಳಿತಸೌಧದ ತಹಸೀಲ್ದಾರ ಸಭಾಭವನದ ಶ್ರೀ ಕನಕದಾಸರ ಜಯಂತಿ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನವೆಂಬರ್ 30 ರಂದು ಬೆಳಿಗ್ಗೆ 11 ಗಂಟೆಗೆ ದಾಸ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯನ್ನು ಆಚರಿಸಲು ನಿರ್ಧರಿಸಲಾಗಿದ್ದು, ಜಯಂತಿಯಂದು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಗುವುದು. ಕನಕದಾಸರ ಜೀವನ ಹಾಗೂ ಅವರು ನಾಡಿಗೆ ನೀಡಿರುವ ಕೊಡುಗೆಯ ಕುರಿತು ಉಪನ್ಯಾಸ ಏರ್ಪಡಿಸಲಾಗುತ್ತದೆ. ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಿ.ವಿ. ಕರವೀರಮಠ ಅವರು ಜಯಂತಿ ಕಾರ್ಯಕ್ರಮದ ರೂಪರೇಷಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತೀರ್ಣಾಧಿಕಾರಿ ಸುರೇಶ ಗುರಣ್ಣವರ, ಡಿ.ಎಸ್.ಈರಗಾರ, ಶಿವಾನಂದ ನಾಶಿ, ಸಂಗೀತ ಕಬಾಡಿ, ವಿಶಾಲ ಸಿಂಗ್, ಸಮಾಜದ ಮುಖಂಡರಾದ ಗೋಪಾಲ ಕಲ್ಲೂರ, ಹನುಮಂತಪ್ಪ ಮಾಡಳ್ಳಿ, ಸಂಜೀವ ದುಮ್ಮಕನಾಳ, ಸುನೀತಾ ಹೊಸಪೇಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.