ಬೆಂಗಳೂರು, ನವೆಂಬರ್ 20 (ಕರ್ನಾಟಕ ವಾರ್ತೆ) :
ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್(ಸಿಎಜಿ) ನೇತೃತ್ವದಲ್ಲಿ ಸರ್ಕಾರಿ ಆಡಿಟ್ ಸಮುದಾಯವು ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಉತ್ತಮ ಆಡಳಿತವನ್ನು ಉತ್ತೇಜಿಸಲು ಗಮನಾರ್ಹ ಕೊಡುಗೆಗಳನ್ನು ನೀಡಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಶಂಸಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾದ ಲೆಕ್ಕ ಪರಿಶೋಧನಾ ದಿನ-2023 ಸಮಾರಂಭಧಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರಾಜ್ಯಪಾಲರು, ಒಂದು ಸಂಸ್ಥೆಯಾಗಿ ಸಿಎಜಿಯ ಐತಿಹಾಸಿಕ ರಚನೆ ಮತ್ತು ವರ್ಷಗಳಲ್ಲಿ ಉತ್ತಮ ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಅದರ ಕೊಡುಗೆಯನ್ನು ಸ್ಮರಿಸಲು ನವೆಂಬರ್ 16 ಅನ್ನು ದೇಶದಲ್ಲಿ ಲೆಕ್ಕಪರಿಶೋಧನಾ ದಿನವಾಗಿ ಆಚರಿಸಲಾಗುತ್ತದೆ. ಭಾರತದ ಸಿಎಜಿ ಸಂಸ್ಥೆಯು ಅಂತರಾಷ್ಟ್ರೀಯ ವೇದಿಕೆಗಳಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿರುವುದು ಪ್ರಶಂಸನೀಯ ಎಂದರು.
ಉತ್ತಮ ಆಡಳಿತ ಮತ್ತು ರಾಷ್ಟ್ರ ನಿರ್ಮಾಣದ ಹಿತದೃಷ್ಟಿಯಿಂದ ನಮ್ಮ ಸಂವಿಧಾನ ತಯಾರಕರು ಸಿಎಜಿಯನ್ನು ರಚಿಸಿದ್ದಾರೆ. ವಿಶೇಷ ಹಕ್ಕು ಮತ್ತು ಸ್ಥಾನಮಾನ ನೀಡಲಾಗಿದೆ. ಸಿಎಜಿ ಪ್ರಮುಖ ಶಾಸಕಾಂಗ ಸಮಿತಿಗಳ ಮೂಲಕ ಶಾಸಕಾಂಗಕ್ಕೆ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದೆ – ಉದಾಹರಣೆಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಸಾರ್ವಜನಿಕ ಉದ್ಯಮಗಳ ಸಮಿತಿ ಮತ್ತು ಸ್ಥಳೀಯ ಸಂಸ್ಥೆಗಳ ಸಮಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಕರ್ನಾಟಕವು ತನ್ನ ಶ್ರೀಮಂತ ಪರಂಪರೆ ಮತ್ತು ಕ್ರಿಯಾತ್ಮಕ ಆರ್ಥಿಕತೆಯ ಕಾರಣದಿಂದಾಗಿ, ಯಾವಾಗಲೂ ನಾವೀನ್ಯತೆ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಉತ್ತಮ ಆಡಳಿತಕ್ಕಾಗಿ ಹೊಸ ಆಲೋಚನೆಗಳು ಮತ್ತು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಯಾವಾಗಲೂ ಮುಂಚೂಣಿಯಲ್ಲಿದೆ. ಸಿಎಜಿ ತನ್ನ ಆಡಿಟ್ನಲ್ಲಿ ರಿಮೋಟ್ ಸೆನ್ಸಿಂಗ್, ಡ್ರೋನ್ಗಳು ಮತ್ತು ವಿವಿಧ ಉಪಕರಣಗಳಂತಹ ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ತಿಳಿಸಲಾಗಿದೆ. ನಿಜಕ್ಕೂ ಇದೊಂದು ಉತ್ತಮ ಹೆಜ್ಜೆಯಾಗಿದೆ ಎಂದು ಹೇಳಿದರು.
ಭಾರತದಲ್ಲಿ, ಸಾರ್ವಜನಿಕ ಹಣವನ್ನು ರಕ್ಷಿಸುವಲ್ಲಿ ಮತ್ತು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ದೇಶದ ಸಂಪೂರ್ಣ ಹಣಕಾಸು ವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ಸಿಎಜಿ ಪ್ರಮುಖ ಪಾತ್ರ ವಹಿಸಿದೆ. ಇದರಿಂದ ದೇಶದ ಆರ್ಥಿಕತೆ ಇಂದು ಬಲಿಷ್ಠವಾಗುತ್ತಿದೆ. ನಾವು ಸ್ವತಂತ್ರ ಭಾರತದ ಅಭಿವೃದ್ಧಿ ಪಯಣ ಅಮೃತಕಾಲದ ಮೂಲಕ ಹಾದು ಹೋಗುತ್ತಿದ್ದೇವೆ. ದೇಶವಾಸಿಗಳು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ವೇಗವಾಗಿ ಸಾಗುತ್ತಿದ್ದಾರೆ. ಇದಕ್ಕಾಗಿ ಸಿಎಜಿ ಸೇರಿದಂತೆ ದೇಶದ ಎಲ್ಲ ಪ್ರಮುಖ ಸಂಸ್ಥೆಗಳು ಮತ್ತು ಸಮುದಾಯಗಳ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದರು.
ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಮಾಡುವಲ್ಲಿ ಎಲ್ಲರ ಪಾತ್ರ ಮಹತ್ವದ್ದಾಗಿದೆ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ದೇಶದ ಅಭಿವೃದ್ಧಿ ಪಯಣದಲ್ಲಿ ಒಡನಾಡಿ ಮತ್ತು ಮಾರ್ಗದರ್ಶಕರಾಗಿದ್ದಾರೆ. ಹೊಸ ಭಾರತ, ಶ್ರೇಷ್ಠ ಭಾರತ ಮತ್ತು ಉತ್ತಮ ಭಾರತವನ್ನು ನಿರ್ಮಿಸುವಲ್ಲಿ ಕೊಡುಗೆ ನೀಡಬೇಕು ಹಾಗೂ ಸಾರ್ವಜನಿಕ ಹಿತಾಸಕ್ತಿ, ಸಮಗ್ರತೆಗೆ ಅನುಗುಣವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ನ್ಯಾಷನಲ್ ಇ-ಗವರ್ನೆನ್ಸ್ ಸರ್ವೀಸಸ್ ಲಿಮಿಟೆಡ್ನ ಮಾಜಿ ನಿರ್ದೇಶಕಿ ನಿವೇದಿತಾ, ಪ್ರಧಾನ ಅಕೌಂಟೆಂಟ್ ಜನರಲ್ (ಆಡಿಟ್-11) ಶ್ರೀ. ವಿಮಲೇಂದ್ರ ಆನಂದ ಪಟವರ್ಧನ್, ಅಕೌಂಟೆಂಟ್ ಜನರಲ್ ಸ್ಮಿತಾ ಗೋಪಾಲ್, ಪ್ರಧಾನ ನಿರ್ದೇಶಕರು (ಆಡಿಟ್-) ದೀಪನಾ ಗೋಕುಲ್ರಾಮ್, ಪ್ರಧಾನ ನಿರ್ದೇಶಕರು (ಆಡಿಟ್- ಡಿಫೆನ್ಸ್ ಕಮರ್ಷಿಯಲ್) ರಾಜೇಶ್ ರಂಜನ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.