ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.18: ಅಂಗವಿಕಲರು ಮತ್ತು ಸಾರ್ವಜನಿಕರ ಮೊದಲ ಆದ್ಯತೆ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ಆಗಿರುತ್ತದೆ. ಆದ್ದರಿಂದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯದ ಕಡೆ ಕಾಳಜಿ ವಹಿಸಬೇಕು ಎಂದು ಮಲ್ಲಿಗವಾಡದ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಡಾ. ಪ್ರವೀಣ್ ಹೇಳಿದರು
ತಾಲೂಕಿನ ಮಲ್ಲಿಗವಾಡ ಗ್ರಾಮ ಪಂಚಾಯತ ಆವರಣದಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮದಡಿ ವಿಕಲಚೇತನರಿಗೆ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಕ್ಕರೆ ಖಾಯಿಲೆ, ಅಪೌಷ್ಠಿಕತೆ, ರಕ್ತಹೀನತೆ, ಅಧಿಕ ರಕ್ತದೊತ್ತಡ ಹಾಗೂ ಟಿಬಿ ಖಾಯಿಲೆಯಂತಹ ರೋಗಗಳ ಬಗ್ಗೆ ನಿರ್ಲಕ್ಷ್ಯ ಮಾಡಬಾರದು ವೈದ್ಯರ ಸಲಹೆ ಸೂಚನೆ ಪಡೆದುಕೊಂಡು ಆರೋಗ್ಯ ರಕ್ಷಿಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಮಂಜುನಾಥ ಬಡಪಕ್ಕಿರಪ್ಪನವರ ಮಾತನಾಡಿ, ಅಂಗವಿಕಲರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಗ್ರಾಮ ಆರೋಗ್ಯ ಕಾರ್ಯಕ್ರಮದಡಿ ವಿಕಲಚೇತನರಿಗೆ ಆರೋಗ್ಯ ತಪಾಸಣಾ ಶಿಬಿರ ಎಂಬ ಒಳ್ಳೆಯ ಯೋಜನೆ ಜಾರಿಗೆ ತಂದು ಮಾದರಿ ಕಾರ್ಯಕ್ರಮ ನೀಡಿದೆ. ಹಾಗಾಗಿ ಗ್ರಾಮದ ಅಂಗವಿಕಲರ ಈ ಯೋಜನೆವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ರಾಮಣ್ಣ ಮೆಣಸಿನಕಾಯಿ, ಪಕ್ಕಿರಯ್ಯ ಕಾಯಿ, ನಾಗಪ್ಪ ಸಂಕ್ರಣ್ಣವರ, ಹನುಮಂತಪ್ಪ ಜಾಡರ, ಗ್ರಾಪಂ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಅಂಗವಿಕಲರು ಉಪಸ್ಥಿತರಿದ್ದರು.