ಹುಬ್ಬಳ್ಳಿ (ಕರ್ನಾಟಕ ವಾರ್ತೆ) ನ.17: ವಿಕಲಚೇತನರು ಸಕ್ಕರೆ ಖಾಯಿಲೆ, ಅಪೌಷ್ಠಿಕತೆ, ರಕ್ತಹೀನತೆ, ಅಧಿಕ ರಕ್ತದೊತ್ತಡ ಹಾಗೂ ಟಿಬಿ ಖಾಯಿಲೆಯಂತಹ ರೋಗಗಳನ್ನು ಹಂತ ಹಂತವಾಗಿ ಪರಿಶೀಲಿಸಿಕೊಂಡು ಮುಂದೆ ಆಗಬಹುದಾದ ಸಮಸ್ಯೆಗಳನ್ನು ತಡೆಯಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಿ. ಪ್ರವೀಣ ಹೇಳಿದರು.
ತಾಲೂಕಿನ ಕೋಳಿವಾಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಗ್ರಾಮ ಆರೋಗ್ಯ ಕಾರ್ಯಕ್ರಮದಡಿ ವಿಕಲಚೇತನರಿಗೆ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಗವಿಕಲರು ಸೇರಿದಂತೆ ಸಾರ್ವಜನಿಕರು ಖಾಯಿಲೆಗಳನ್ನು ಹಂತ ಹಂತವಾಗಿ ಪರೀಕ್ಷೆ ಮಾಡಿಸಿಕೊಳ್ಳದಿರುವ ಪಕ್ಷದಲ್ಲಿ ರೋಗಗಳು ವಿಪರೀತ ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಅಂಗವಿಕಲರ, ಸಾರ್ವಜನಿಕರು ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದರು.
ಪಂಚಾಯತ ಅಭಿವೃದ್ಧಿ ಅಧಿಕಾರಿ ಎಫ್. ಡಿ ತೋಟದ ಮಾತನಾಡಿ, ಅಂಗವಿಕಲರಗಾಗಿ ಸರ್ಕಾರ ಗ್ರಾಮ ಪಂಚಾಯತ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನೀಡಿದೆ. ಅಲ್ಲದೇ 5% ಅನುದಾನದಡಿ ವಿವಿಧ ಸೌಲಭ್ಯಗಳನ್ನು ಒದಗಿಸುತ್ತದೆ. ವಿಕಲಚೇತನರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಡಾ. ಪ್ರವೀಣ ಗೌರಿ, ಅಂಗವಿಕಲರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಪ್ರಿಯಾಂಕ ಹೋಳಿ, ಆಶಾ ಕಾರ್ಯಕರ್ತೆಯರಾದ ರೇಖಾ ಮಂಗಳ, ಮಾದೇವಿ ಗಿರಿಯಮ್ಮನವರ, ಲಕ್ಷ್ಮೀ ಜಂತ್ಲಿ, ಗೀತಾ ಈರಗಾರ ಸೇರಿದಂತೆ ಅಂಗವಿಕಲರು, ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.