Site icon MOODANA Web Edition

ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ ಸೌಲಭ್ಯ ನೋಂದಣಿಗೆ ನಿರ್ವಾಹಕರು, ಕ್ಲೀನರ್‍ಗಳಿಗೂ ಅವಕಾಶ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಅ.26: ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯಡಿ ಚಾಲಕರೊಂದಿಗೆ ನಿರ್ವಾಹಕರು ಹಾಗೂ ಕ್ಲೀನರ್‍ಗಳಿಗೂ ಸಹ ಅಪಘಾತ ವಿಮಾ ಸೌಲಭ್ಯವನ್ನು ವಿಸ್ತರಿಸಲು ಪರಿಷ್ಕøತ ಕರ್ನಾಟಕ ರಾಜ್ಯ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಸಾರಿಗೆ ಇಲಾಖೆಯಿಂದ ಕರ್ನಾಟಕ ರಾಜ್ಯದಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ವಾಹನ ಚಾಲನಾ ಪರವಾನಗಿ ಪಡೆದ ಚಾಲಕರು ತಕ್ಷಣದಿಂದ ಫಲಾನುಭವಿಯೆಂದು ಪರಿಗಣಿಸುತ್ತಿದ್ದು, ನಿರ್ವಾಹಕರು ಹಾಗೂ ಕ್ಲೀನರ್‍ಗಳು ಯೋಜನೆಯಡಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ನೋಂದಣಾಧಿಕಾರಿಗಳಲ್ಲಿ ನೋಂದಾಯಿಸಬೇಕಾಗುತ್ತದೆ.

ನೋಂದಾಯಿಸಲು ಇತ್ತೀಚಿನ ಭಾವಚಿತ್ರ, ವಿಳಾಸವಿರುವ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಯಸ್ಸಿನ ದೃಢೀಕರಣ ಪತ್ರ, ಆಧಾರ ಕಾರ್ಡ್,ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಪಾನ್ ಕಾರ್ಡ್, ನೋಂದಾಯಿತ ಎಂ.ಬಿ.ಬಿ.ಎಸ್ ವೈದ್ಯರಿಂದ ವಯಸ್ಸಿನ ಪ್ರಮಾಣ ಪತ್ರ, ಶಾಲಾ ದಾಖಲೆ, ಡಿ.ಎಲ್, ಬ್ಯಾಂಕ್ ಖಾತೆ ಪ್ರತಿ, ನಿಗಧಿಪಡಿಸಿದ ಉದ್ಯೋಗ ಪ್ರಮಾಣ ಪತ್ರ, ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಥೆ, ಮಾಲೀಕರಿಂದ ಗುರುತಿನ ಚೀಟಿ (ಲಭ್ಯವಿದ್ದಲ್ಲಿ), ನಿರ್ವಾಹಕರಿಗೆ ಊರ್ಜಿತ ಪರವಾನಗಿ ಸಾರಿಗೆ ಇಲಾಖೆಯಿಂದ ಪಡೆದಿರಬೇಕು (ನಿರ್ವಾಹಕರಿಗೆ ಮಾತ್ರ).
ಅರ್ಜಿದಾರರು ಕರ್ನಾಟಕ ರಾಜ್ಯ ನಿವಾಸಿಯಾಗಿರಬೇಕು. 20 ರಿಂದ 70 ವರ್ಷದೊಳಗಿರಬೇಕು. ನಿರ್ವಾಹಕರಿಗೆ ಸಂಬಂಧಿಸಿದಂತೆ ಮೋಟಾರ್ ವಾಹನಗಳ ಕರ್ನಾಟಕ ನಿಯಮಗಳು 1989ರ ಅಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ನೀಡಲಾಗಿರುವ ಊರ್ಜಿತ ನಿರ್ವಾಹಕರ ಪರವಾನಗಿಯನ್ನು ಹೊಂದಿರಬೇಕು. ವಾಣಿಜ್ಯ ಸಾರಿಗೆ ವಾಹನ ಸಂಸ್ಥೆಯಲ್ಲಿ 12 ತಿಂಗಳಲ್ಲಿ 90 ದಿನಗಳಿಗೆ ಕಡಿಮೆ ಇಲ್ಲದಂತೆ ಕಾರ್ಯನಿರ್ವಹಿಸಿರಬೇಕು. ಒಮ್ಮೆ ನೋಂದಾಣಿಯಾದ ನಂತರ ನೀಡಲಾದ ಗುರುತಿನ ಚೀಟಿಯು 3 ವರ್ಷಗಳವರೆಗೆ ಊರ್ಜಿತದಲ್ಲಿರುತ್ತದೆ. ನಂತರ ನವೀಕರಣಕ್ಕೆ ನಿಗಧಿಪಡಿಸಿದ ದಾಖಲೆಗಳನ್ನು ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸಿ ನವೀಕರಿಸಬೇಕು. ನಿರ್ವಾಹಕರು, ಕ್ಲೀನರ್ ಗಳು ನೋಂದಣೆಯಾದ ನಂತರ ವೃತ್ತಿಯನ್ನು ಬದಲಾಯಿಸಿದಲ್ಲಿ ಫಲಾನುಭವಿಯಾಗಿ ಮುಂದುವರೆಯಲು ಅನರ್ಹರಾಗುತ್ತಾರೆ. ಫಲಾನುಭವಿಯು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ 2008ರ ಅನುಸೂಚಿ 2ರಲ್ಲಿ ತಿಳಿಸಿರುವ ಕಾಯ್ದೆಗೆ ಒಳಪಟ್ಟಿರಬಾರದು ಮತ್ತು ಸದರಿ ಕಾಯ್ದೆಗೆ ಒಳಪಟ್ಟಿರುವುದಿಲ್ಲ ಎಂದು ಸ್ವಯಂ ಘೋಷಣೆಯನ್ನು ಒಪ್ಪಿ ಸಹಿ ಮಾಡಬೇಕು.
ಚಾಲಕರು ಕರ್ನಾಟಕ ರಾಜ್ಯದಲ್ಲಿ ಸಾರಿಗೆ ಇಲಾಖೆಯಿಂದ ಪಡೆದ ಚಾಲನಾ ಪರವಾನಗಿ ಹೊಂದಿರಬೇಕು. ಅಂತಹ ಚಾಲಕರು ಮಂಡಳಿಯಲ್ಲಿ ಯೋಜನೆಯಡಿ ಪ್ರತ್ಯೇಕವಾಗಿ ನೋಂದಣಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ. ನಿರ್ವಾಹಕರು ಹಾಗೂ ಕ್ಲೀನರ್‍ಗಳು ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ನೋಂದಣಾಧಿಕಾರಿಗಳಲ್ಲಿ ನೋಂದಾಯಿಸಿಕೊಳ್ಳಬಹುದು.
ಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‍ಗಳು ಮರಣ ಹೊಂದಿದಲ್ಲಿ, ಅವರ ನಾಮನಿರ್ದೇಶಿತರಿಗೆ ರೂ.5 ಲಕ್ಷ ಪರಿಹಾರ, ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಾಗ ಫಲಾನುಭವಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ ರೂ.2 ಲಕ್ಷದವರೆಗೆ ಪರಿಹಾರ,
ಅಪಘಾತದಿಂದ ತಾತ್ಕಾಲಿಕ ದುರ್ಬಲತೆ ಹೊಂದಿದಾಗ, ಆಸ್ಪತ್ರೆ ವೆಚ್ಚದ ಮರುಪಾವತಿ, ಅಪಘಾತಕೊಳ್ಳಗಾಗಿ ಆಸ್ಪತ್ರೆಯಲ್ಲಿ 15 ದಿನಗಳಿಗಿಂತ ಕಡಿಮೆ ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ ಗರಿಷ್ಠ ರೂ. 50 ಸಾವಿರವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ ಹಾಗೂ
15 ದಿನಗಳಿಗಿಂತ ಹೆಚ್ಚು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ ಗರಿಷ್ಠ ರೂ. 1 ಲಕ್ಷದವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ ಮರುಪಾವತಿ ಪಡೆಯಬಹುದು. 2018-19ನೇ ಸಾಲಿನಿಂದ ಅಪಘಾತದ ಕಾರಣ ನಿಧನರಾದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ ಪದವಿಪೂರ್ವ ವ್ಯಾಸಂಗದವರೆಗೆ ವಾರ್ಷಿಕ 10 ಸಾವಿರ ರೂ.ಗಳ ಶೈಕ್ಷಣಿಕ ಸಹಾಯಧನ ನೀಡಲಾಗುತ್ತಿದ್ದು, ಶೈಕ್ಷಣಿಕ ಧನ ಸಹಾಯಕ್ಕಾಗಿ ನಿಗದಿತ ನಮೂನೆಯಲ್ಲಿ ಮೃತರಾದ, ಸಂಪೂರ್ಣ ಅಂಗ ದುರ್ಬಲತೆ ಉಂಟಾದ ಚಾಲಕರ ಇಬ್ಬರು ಮಕ್ಕಳು ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಮಂಡಳಿಗೆ ನೇರವಾಗಿ ಅಥವಾ ತಾಲ್ಲೂಕು, ಜಿಲ್ಲಾ ಮಟ್ಟದ ಕಾರ್ಮಿಕ ಇಲಾಖಾ ಕಚೇರಿಯಲ್ಲಿ ಸಲ್ಲಿಸಿದ್ದಲ್ಲಿ ಅರ್ಜಿಗಳನ್ನು ಪರಿಶೀಲಿಸಿ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಈ ಯೋಜನೆಯಡಿ ನಿರ್ವಾಹಕರು ಮತ್ತು ಕ್ಲೀನರ್ ಗಳು ಷರತ್ತುಗಳನ್ವಯ ಅರ್ಹತೆಯುಳ್ಳ ಕಾರ್ಮಿಕರು ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ಅಧಿಕಾರಿಯವರ ಕಛೇರಿ, ಉಪವಿಭಾಗ-02, 3ನೇ ಮಹಡಿ, ಕಾರ್ಮಿಕ ಭವನ, ಹುಬ್ಬಳ್ಳಿ ನೋಂದಣಿ ಮಾಡಿಸಿಕೊಳ್ಳಬೇಕು. ಆಕಸ್ಮಿಕ ಅಪಘಾತಕ್ಕಿಡಾದ ಸಂದರ್ಭದಲ್ಲಿ ಈ ಯೋಜನೆಯಡಿ ದೊರೆಯುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಮಾರಿಕಾಂಬ ಎಂ. ಹುಲಕೋಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version