Site icon MOODANA Web Edition

ಅಕ್ಟೋಬರ್ 5 ರಿಂದ ರಾಜ್ಯದಲ್ಲಿ ಕೇಂದ್ರ ತಂಡದಿಂದ ಬರ ಅಧ್ಯಯನ

ಬೆಂಗಳೂರು, ಅಕ್ಟೋಬರ್ 4 ( ಕರ್ನಾಟಕ ವಾರ್ತೆ):-
 ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಕೇಂದ್ರ ಮೂರು ತಂಡಗಳು ರಾಜ್ಯಕ್ಕೆ ಅಗಮಿಸುತ್ತಿದ್ದು, ಅಕ್ಟೋಬರ್ 5 ರಿಂದ ನಾಲ್ಕು ದಿನಗಳ ಕಾಲ ವಿವಿಧ ಜಿಲ್ಲಾ ಪ್ರವಾಸ ಕೈಗೊಂಡು ಪರಿಶೀಲನೆ ನಡೆಸಲಿವೆ.
  ಕೇಂದ್ರ ತಂಡ ಹತ್ತು ಸದಸ್ಯರನ್ನೊಳಗೊಂಡಿದ್ದು, ರಾಜ್ಯದ ಸ್ಥಳೀಯ ಅಧಿಕಾರಿಗಳೊಂದಿಗೆ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ.
  ಅಕ್ಟೋಬರ್ 5 ರಂದು ಮೂರೂ ತಂಡಗಳು ಬೆಳಿಗ್ಗೆ 9:30 ರಿಂದ 10:30ರ ಗಂಟೆಯವರೆಗೆ ಕರ್ನಾಟಕ ರಾಜ್ಯ ಪೃಕೃತಿ ವಿಕೋಪ ನಿರ್ವಹಣಾ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಿವೆ. ಮಧ್ಯಾಹ್ನ 12:00 ಗಂಟೆಗೆ ವಿಧಾನ ಸೌಧ ಕೊಠಡಿಯಲ್ಲಿ  ರಾಜ್ಯದ ಬರ ಪರಿಸ್ಥಿತಿಯ ಸಂಕ್ಷಿಪ್ತ ವಿವರ ಪಡೆದು ಜಿಲ್ಲೆಗಳಿಗೆ ತೆರಳಲಿವೆ.

ಜಿಲ್ಲಾ ಪ್ರವಾಸದ ವಿವರ:
ಮೊದಲ ತಂಡವು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು  ಐ.ಎ.ಎಸ್. ಅವರ ನೇತೃತ್ವ. ಇದರಲ್ಲಿ ಎಣ್ಣೆ ಬೀಜಗಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಡಾ. ಜೆ ಪೆÇನ್ನುಸ್ವಾಮಿ, ವೆಚ್ಚ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರಾದ  ಮಹೇಂದ್ರ ಚಂಡೇಲಿಯ, ನೀತಿ ಆಯೋಗದ ಸಂಶೋಧನಾಧಿಕಾರಿ ಶಿವಚರಣ್ ಮೀನಾ, ರಾಜ್ಯ ಕೃಷಿ ಆಯುಕ್ತರಾದ ಎಸ್.ಪಾಟೀಲ್ ಅವರನ್ನು ಒಳಗೊಂಡಿದೆ.

ಎರಡನೆ ತಂಡವು ಕೇಂದ್ರ ಕುಡಿಯುವ ನೀರು ಹಾಗೂ ಸ್ವಚ್ಛತಾ ಸಚಿವಾಲಯದ ಹೆಚ್ಚುವರಿ ಸಲಹೆಗಾರರಾದ ಡಿ.ರಾಜಶೇಖರ್ ಅವರ ನೇತೃತ್ವದಲ್ಲಿ ಪಶುಸಂಗೋಪನೆ ಇಲಾಖೆ ನಿರ್ದೇಶಕರಾದ ಆರ್.ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತರಾದ ಮೋತಿರಾಂ, ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕರಾದ ಕರೀಗೌಡ ಅವರನ್ನು ಒಳಗೊಂಡಿದೆ.

ಮೂರನೇ ತಂಡವು ಕೇಂದ್ರ ಜಲ ಆಯೋಗದ ನಿರ್ದೇಶಕರಾದ ಅಶೋಕ್ ಕುಮಾರ್.ವಿ ಇವರ ನೇತೃತ್ವದಲ್ಲಿ  ಎಂ.ಎನ್.ಸಿ.ಎಫ್.ಸಿಯ ಉಪ ನಿರ್ದೇಶಕರಾದ ಕರಣ್ ಚೌಧರಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ಕಾರ್ಯದರ್ಶಿ ಸಂಗೀತ್ ಕುಮಾರ್ ಹಾಗೂ ರಾಜ್ಯದ  ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ಹಿರಿಯ ಸಲಹೆಗಾರರಾದ ಡಾ ಶ್ರೀನಿವಾಸ ರೆಡ್ಡಿ ಇರಲಿದ್ದಾರೆ.

ತಂಡಗಳ ಪ್ರವಾಸದ ವಿವರ:

ಮೊದಲ ತಂಡ: ಅಕ್ಟೋಬರ್ 5 ರಂದು ಬೆಳಗಾವಿಗೆ ಆಗಮನ.
ಅಕ್ಟೋಬರ್ 6 ರಂದು ಬೆಳಗಾವಿ ಹಾಗೂ ವಿಜಾಪುರ ಜಿಲ್ಲೆಗಳಲ್ಲಿ ಬರ ಪರಿಶೀಲನೆ ನಡೆಸಲಿದ್ದಾರೆ. ಅಕ್ಟೋಬರ್ 7 ರಂದು ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಬರ ಪರಿಶೀಲನೆ ನಡೆಸಲಿದ್ದಾರೆ. ನಂತರ ಅಕ್ಟೋಬರ್ 8 ರಂದು ಬೆಂಗಳೂರಿಗೆ ಪ್ರಯಾಣ ಮಾಡಲಿದ್ದಾರೆ.

ಎರಡನೆ ತಂಡ: ಗದಗ, ಕೊಪ್ಪಳ, ಬಳ್ಳಾರಿ ವಿಜಯನಗರ ಜಿಲ್ಲಾ ಪ್ರವಾಸ ಬರ ಅಧ್ಯಯನ.

ಅಕ್ಟೋಬರ್ 5 ರಂದು ಬೆಂಗಳೂರಿನಿಂದ ಹುಬ್ಬಳಿಗೆ ಪ್ರಯಾಣ ವಾಸ್ತವ್ಯ ಹೂಡಲಿದ್ದು,  ಅಕ್ಟೋಬರ್ 6 ರಂದು ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಬರ ಪರಿಸ್ಥಿತಿ ಅಧ್ಯಯನ. ಅಕ್ಟೋಬರ್ 7 ರಂದು ವಿಜಯನಗರ, ಬಳ್ಳಾರಿ ಜಿಲ್ಲೆಗಳ ಬರ ಅಧ್ಯಯನ. ಅಕ್ಟೋಬರ್ 8 ರಂದು ಬೆಂಗಳೂರಿಗೆ ಪ್ರಯಾಣ ಮಾಡಲಿದ್ದಾರೆ.

ಮೂರನೇ ತಂಡ:  

ಅಕ್ಟೋಬರ್ 6 ರಂದು ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳ ಪ್ರವಾಸ ನಡೆಸಿ ಚಿತ್ರದುರ್ಗ ವಾಸ್ತವ್ಯ ಹೂಡಲಿದ್ದು,  ಅಕ್ಟೋಬರ್ 7 ರಂದು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆ ಪ್ರವಾಸ ನಡೆಸಿ ಬೆಂಗಳೂರು ಆಗಮನ. ಅಕ್ಟೋಬರ್ 8 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬರ ಪರಿಸ್ಥಿತಿ ಅಧ್ಯಯನ ನಡೆಸಲಿದ್ದಾರೆ.
  ಮೂರು ತಂಡಗಳು ಅಕ್ಟೋಬರ್ 8 ರಂದು ಬೆಂಗಳೂರಿಗೆ ಆಗಮಿಸಿ ಅಕ್ಟೋಬರ್  9 ರಂದು ಬೆಂಗಳೂರಿನಲ್ಲಿ ಮತ್ತೊಮ್ಮೆ ಸ್ಥಳೀಯ ಅಧಿಕಾರಿಗಳಿಂದ  ಸಂಕ್ಷಿಪ್ತ ವಿವರಣೆ ಪಡೆದು ದೆಹಲಿಗೆ ತೆರಳಲಿದೆ.

ಅಧಿಕಾರಿಗಳಿಗೆ ಕೃಷಿ  ಸಚಿವರ ಸೂಚನೆ:

ಕೇಂದ್ರ ತಂಡ ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈ ಸಾಲಿನ ಮಳೆಯ ವಾಸ್ತವ ಪರಿಸ್ಥಿತಿ ಮನವರಿಕೆ ಮಾಡಿಕೊಡಬೇಕು.
ಹಲವು ಕಡೆ ಸಂಪೂರ್ಣ ಬೆಳೆ ಹಾನಿಯಾಗಿದ್ದು, ಕೆಲವೆಡೆ ಬೆಳೆ ಇದ್ದರೂ ಉಂಟಾಗಲಿರುವ ತೀವ್ರ ಇಳುವರಿ ಕುಸಿತದ ಬಗ್ಗೆ ಪರಿಣಾಮಕಾರಿಯಾಗಿ ವಿವರಿಸಿ ಅರ್ಥ ಮಾಡಿಕೊಡಬೇಕು ಎಂದು ಕೃಷಿ ಸಚಿವರಾದ  ಎನ್. ಚಲುವರಾಯಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Exit mobile version